ತರೀಕೆರೆ: ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗೆ ತಲುಪಿದಾಗ ಮಾತ್ರ ಯೋಜನೆ ಸಾರ್ಥಕ್ಯ ಹೊಂದಲು ಸಾಧ್ಯ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಅರಣ್ಯ ಇಲಾಖೆ ವತಿಯಿಂದ ಗಿರಿಜನ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಉಚಿತ ಹಣ್ಣಿನ ಸಸಿಗಳನ್ನು ಇತ್ತೀಚೆಗೆ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯೋಜನೆಯ ಲಾಭ ದಲಿತ ವರ್ಗದಲ್ಲಿನ ಪ್ರಬಲರಿಗೆ ಮಾತ್ರ ದೊರೆಯುತ್ತಿದ್ದು, ಕೆಲವೇ ಮಂದಿ ಹಲವು ಯೋಜನೆಗಳ ಫಲಾನುಭವಿಗಳಾಗುತ್ತಿರುವುದು ನಿಜಕ್ಕೂ ವಿಷಾದಕರ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಠಿಣ ನಿಲುವು ತಾಳಿ ಯಾರ ಒತ್ತಡಕ್ಕೂ ಮಣಿಯದ ನೈಜ ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಯ ಲಾಭ ತಲುಪಿಸಲು ಮುಂದಾಗುವಂತೆ ಕರೆ ನೀಡಿದರು.
ಬಡ ರೈತರು ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಬಗರ್ ಹುಕ್ಕುಂ ಸಾಗು ಮಾಡುತ್ತಿದ್ದು, ‘ಡೀಮ್ಡ್ ಫಾರೆಸ್ಟ್’ ಎಂಬ ಹೆಸರಿನಲ್ಲಿ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವಲ್ಲಿ ಮುಂದಾಗಿರುವುದು ಗಮನಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳು ಕಾನೂನಿನೊಂದಿಗೆ ಮಾನವೀಯತೆಯನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ತಿಳಿಸಿದರು.
ವಲಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೆಡ್ಡೇರ್, ಪುರಸಭೆ ಸದಸ್ಯೆ ಅನ್ನಪೂರ್ಣಮ್ಮ, ರಂಗಪ್ಪ , ಇನ್ನಿತರರು ಭಾಗವಹಿಸಿದ್ದರು.