ಬೆಂಗಳೂರು: ‘ಗುರು ಮತ್ತು ಶಿಷ್ಯರ ನಡುವೆ ಇರಬೇಕಾದ ಸ್ನೇಹ ಸಂಬಂಧದ ಪರಂಪರೆ ಕರಗುತ್ತಿದೆ’ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು ಪ್ರೊ.ಬಿ.ಆರ್.ರಾಮಚಂದ್ರೇಗೌಡ ಟ್ರಸ್ಟ್ ಸಹಯೋಗದೊಂದಿಗೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತಿ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಕರಿದ್ದರೆ ಮಾತ್ರ ಶಿಷ್ಯರ ಭವಿಷ್ಯ ಉದ್ಧಾರವಾಗಲು ಸಾಧ್ಯ. ಇದಕ್ಕೆ ನಾನೇ ಸ್ಪಷ್ಟ ಉದಾಹರಣೆ’ ಎಂದು ಹೇಳಿದರು.
‘ಸರ್ಕಾರಿ ಕಲಾ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೊ.ರಾಮಚಂದ್ರಗೌಡ ಅವರು ನನಗೆ ಶಿಕ್ಷಕರಾಗದಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪಿಸಿಕೊಂಡರು.
‘ಗುರಿ, ಆಸಕ್ತಿ ಹಾಗೂ ಅಧ್ಯಯನದ ಜತೆಯಲ್ಲಿ ಗುರುವಿನ ಆರ್ಶೀವಾದವು ಮುಖ್ಯವಾಗುತ್ತದೆ. ಹೊಸ ಪೀಳಿಗೆಯಲ್ಲಿ ಗುರುವಿನೆಡೆಗೆ ಇರಬೇಕಾದ ಭಕ್ತಿ ಭಾವ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ, ‘ಕನ್ನಡ ಹಾಗೂ ಬದುಕು ಕಟ್ಟುವ ಕಾಯಕವನ್ನು ರಾಮಚಂದ್ರೇಗೌಡರಿಂದ ಕಲಿತೆ. ಅವರು ಹೃದಯಶ್ರೀಮಂತಿಕೆಯಿಂದಲೇ ನೂರಾರು ಶಿಷ್ಯಪಡೆಯನ್ನು ಅವರು ಆಕರ್ಷಿಸಿದ್ದರು’ ಎಂದು ನೆನಪಿಸಿಕೊಂಡರು.
ರಾಮಕೃಷ್ಣ –ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು.