ಅಮೀನಗಡ: ‘ರಾಜ್ಯದಲ್ಲಿ ಭ್ರಷ್ಟಾಚಾರದ ಅಧಿಕಾರ ನಡೆಸಿದ ಬಿಜೆಪಿ ರಾಜ್ಯದ ಮಾನವನ್ನು ದೇಶದ ಮಟ್ಟದಲ್ಲಿ ಹರಾಜು ಮಾಡಿದೆ; ಆ ಕಪ್ಪು ಚುಕ್ಕೆಯನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಉತ್ತಮ ಆಡಳಿತ, ಜನಪರ ನಿಲುವುಗಳಿಗೆ ಒತ್ತು ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.
ಇಲ್ಲಿಗೆ ಸಮೀಪದ ಹಿರೇಮಾಗಿಯಲ್ಲಿ ಗ್ರಾಮ ಪಂಚಾಯ್ತಿ ಮತ್ತು ಕಾಂಗ್ರೆಸ್ ಗ್ರಾಮ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭೂ ಮಾಫಿಯಾ, ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ ಸೇರಿ ಅಕ್ರಮ ಚಟುವಟಿಕೆಗಳ ಮೂಲಕ ಹಿಂದಿನ ಸರ್ಕಾರವು ರಾಜ್ಯ ತಲೆ ತಗ್ಗಿಸುವಂತೆ ಮಾಡಿದ್ದು, ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಸ್ವಾವಲಂಬಿಯಾಗಿ ಮಾಡಿ ರಾಜ್ಯಕ್ಕೆ ಮರಳಿ ಗೌರವ ತರುವಂತಹ ಕೆಲಸ ಮಾಡುತ್ತದೆ ಎಂದರು.
ಬೀಳಗಿ ಶಾಸಕ ಜಿ.ಟಿ. ಪಾಟೀಲ ಮಾತನಾಡಿ, ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಯೋಜನೆಗಳನ್ನು ರೂಪಿಸಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಹುನಗುಂದ ಶಾಸಕ ಡಾ.ವಿಜಯಾನಂದ ಕಾಶಪ್ಪನವರ, ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದರು.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಮಾತನಾಡಿದರು. ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಪರಶುರಾಮ ನೀಲನಾಯಕ, ಚನ್ನಬಸಪ್ಪ ಅಜ್ಜ, ಹಿರೇಮಾಗಿ ಗ್ರಾಪಂ ಅಧ್ಯಕ್ಷ ರಮೇಶ ದೊಡಮನಿ, ರಮೇಶ ಚಿತ್ತರಗಿ, ಅಮೀನಗಡ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ತತ್ರಾಣಿ, ಮಾಜಿ ಅಧ್ಯಕ್ಷ ವೈ.ಎಸ್. ಬಂಡಿವಡ್ಡರ, ಜಿಪಂ ಸದಸ್ಯ ಬಸವಂತಪ್ಪ ಮೇಟಿ, ಡಾ.ಎಂ.ಎಸ್. ದಡ್ಡೇನವರ, ಆನಂದ ಜಿಗಜಿನ್ನಿ, ಬಾಯಕ್ಕ ಮೇಟಿ ಉಪಸ್ಥಿತರಿದ್ದರು.