‘ಈ ಸಿನಿಮಾದಲ್ಲಿ ಮೂವರು ಹೀರೊಗಳು’ – ಶರಣ್ ಹೀಗೆ ಹೇಳಿದಾಗ ಎಲ್ಲರಿಗೂ ಅಚ್ಚರಿ. ತಕ್ಷಣವೇ ಅದಕ್ಕೆ ಸ್ಪಷ್ಟನೆ ಕೊಟ್ಟರು: ‘ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ವಸಂತ್, ನಿರ್ದೇಶಕ ದೇವರಾಜ ಪಾಲನ್ ಹಾಗೂ ನಿರ್ಮಾಪಕ ಜಾನಕಿ ತುಳಸೀರಾಮನ್’.
‘ಹರ’ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಅಭಿನಯಿಸಿರುವ ಶರಣ್, ಸಿನಿಮಾದ ದನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಉತ್ಸಾಹದಿಂದಲೇ ಬಂದಿದ್ದರು.
ಅವರ ಪ್ರಕಾರ, ವಸಂತ್ ಮೊದಲ ಬಾಲ್ನಲ್ಲೇ ಸಿಕ್ಸರ್ ಹೊಡೆಯಲಿದ್ದಾರಂತೆ. ಇನ್ನು ಅಚ್ಚುಕಟ್ಟುತನ ನೀಡಿದ ನಿರ್ದೇಶಕ ಪಾಲನ್ ಹಾಗೂ ಇದಕ್ಕೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡ ನಿರ್ಮಾಪಕ ತುಳಸೀರಾಮನ್ ಕೂಡ ಹೀರೊ ಎಂದು ಕೊಂಡಾಡಿದರು. ‘ಹರ+ಸಾಹಸ=ಹರಸಾಹಸ ಅನ್ನೋದೇನೋ ಸರಿ. ಆದರೆ ಹರ+ಸಾಹಸ= ತುಳಸೀರಾಮನ್’ ಎಂಬ ಹೊಸ ಸಮೀಕರಣವನ್ನು ಶರಣ್ ಮಂಡಿಸಿದರು!
ತೆಲುಗಿನ ‘ಚಿನ್ನೋಡು’ ಚಿತ್ರ ನೋಡಿದ ತುಳಸೀರಾಮನ್, ಇದನ್ನು ‘ಹರ’ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲು ನಿರ್ಧರಿಸಿದರು. ಕೊಲೆ ಮಾಡಿ ಜೈಲು ಸೇರುವ ನಾಯಕ ಬಿಡುಗಡೆಯಾಗಿ ಬಂದ ನಂತರ ಆತನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದೇ ‘ಹರ’ನ ಕಥೆ.
ಚಿತ್ರದ ನಾಯಕ ಪಾತ್ರಕ್ಕೆ ಹೊಸ ಮುಖ ಹಾಕಿಕೊಳ್ಳಲು ನಿರ್ದೇಶಕರಿಗೆ, ತುಳಸೀರಾಮನ್ ಸೂಚಿಸಿದ್ದರಂತೆ. ಅದರಂತೆ ಆಯ್ಕೆಯಾದ ವಸಂತ್ಗೆ ಮೊದಲ ಚಿತ್ರವೇ ದೊಡ್ಡ ಬಜೆಟ್ನಿಂದ ಕೂಡಿರುವುದು ಖುಷಿ ಕೊಟ್ಟಿದೆ. ‘ಸಿನಿಮಾ ರಿಚ್ ಆಗಿದೆ. ಅದರಲ್ಲೂ ಶರಣ್ರಂಥ ನಟನ ಜತೆ ಕೆಲಸ ಮಾಡಿರುವುದು ನನ್ನ ಪುಣ್ಯ’ ಎಂದು ಭಾವೋದ್ವೇಗದಿಂದ ನುಡಿದರು.
ದೇವರಾಜ ಪಾಲನ್ ಮೊದಲ ಬಾರಿಗೆ ನಿರ್ದೇಶಕನಾಗಿದ್ದಾರೆ. ‘ಹರ ಅಂದ್ರೆ ಶಿವ, ಬೇಗ ವರ ಕೊಡ್ತಾನೆ; ಬೇಗ ಶಿಕ್ಷೇನೂ ಕೊಡ್ತಾನೆ. ಅಂಥ ಪಾತ್ರ ನಾಯಕನದು’ ಎಂದು ಒಂದೇ ಉಸುರಿಗೆ ಹೇಳಿದರು.
ಸಂಗೀತ ನೀಡಿರುವ ಜೆಸ್ಸಿ ಗಿಫ್ಟ್ ‘ಹಾಡು ಚೆನ್ನಾಗಿವೆ. ಕೇಳಿ ಪ್ರೋತ್ಸಾಹಿಸಿ’ ಎಂಬ ನಾಲ್ಕೈದು ಶಬ್ದಗಳ ಹೊರತಾಗಿ ಬೇರೇನೂ ಹೇಳಲಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಡಿ. ಗಂಗರಾಜು ದನಿಸುರುಳಿ ಬಿಡುಗಡೆ ಮಾಡಿದರು. z
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.