ಬೆಂಗಳೂರು: ಮಲ್ಲೇಶ್ವರದಲ್ಲಿರುವ ಹಳ್ಳಿಮನೆ ಹೋಟೆಲ್ನಲ್ಲಿ ಬಾಲ ಕಾರ್ಮಿಕರನ್ನು ನೇಮಕ ಮಾಡಿ ಕೊಳ್ಳಲಾಗಿದೆ ಎಂಬ ಆರೋಪದ ಅಡಿ ನಡೆಯುತ್ತಿದ್ದ ಪೊಲೀಸ್ ತನಿಖೆಗೆ ಹೈಕೋರ್ಟ್ ಎಂಟು ವಾರಗಳ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹೋಟೆಲ್ನ ಪಾಲುದಾರ ಎನ್. ಸಂಜೀವ ರಾವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಮಂಗಳವಾರ ಈ ಆದೇಶ ನೀಡಿದ್ದಾರೆ.
ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ಸರಿಯಾಗಿ ಊಟ–ತಿಂಡಿ ನೀಡುತ್ತಿಲ್ಲ ಎಂಬ ಆರೋಪದ ಅಡಿ ಹಳ್ಳಿಮನೆ ಹೋಟೆಲ್ ಮೇಲೆ ಆಗಸ್ಟ್ನಲ್ಲಿ ಸಿಐಡಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಬಾಲಕಾರ್ಮಿಕರು ಎನ್ನಲಾದ 17 ಜನರನ್ನು ಅವರು ಪತ್ತೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 20ರಂದು ಪ್ರಕರಣ ದಾಖಲಾಗಿದೆ.
ಇದನ್ನು ಪ್ರಶ್ನಿಸಿ ಸಂಜೀವ ಅವರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.