ಹೊಸಕೋಟೆ: ‘ಬೆಂಗಳೂರು ಹಾಲು ಒಕ್ಕೂಟ ಹೊಸ ಕೋಟೆ ಬಳಿ ಸ್ಥಾಪಿಸಿರುವ ಹಾಲು ಪ್ಯಾಕಿಂಗ್ ಘಟಕ ಮಾರ್ಚ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸಿ.ಮಂಜುನಾಥ್ ಹೇಳಿದರು.
ಹೊಸಕೋಟೆಯಲ್ಲಿ ಮಂಗಳವಾರ ನಡೆದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳ ಪ್ರಾದೇಶಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪಶು ಮೇವಿಗೆ ಹೆಚ್ಚಿನ ಬೇಡಿಕೆಯಿದ್ದು ಕೆಎಂಎಫ್ನಿಂದ ಸಾಕಷ್ಟು ಪ್ರಮಾಣದಲ್ಲಿ ಅದು ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಒಕ್ಕೂಟ ತನ್ನದೇ ಆದ ಪಶು ಮೇವು ಘಟಕವನ್ನು ವಿಜಯಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಕಲ್ಲಹಳ್ಳಿ, ಮುತ್ಸಂದ್ರ ಹಾಗು ಚೊಕ್ಕಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಾಲ್ಲೂಕಿನ ಅತ್ಯುತ್ತಮ ಸಹಕಾರ ಸಂಘಗಳೆಂಬ ಪ್ರಶಸ್ತಿ ನೀಡಲಾಯಿತು. ದಿನಕ್ಕೆ 175 ಲೀಟರ್ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮುತ್ಸಂದ್ರ ಹಾಲು ಉತ್ಪಾದಕರ ಸಂಘದ ಜ್ಯೋತಿ ಅವರಿಗೆ ಹೆಚ್ಚು ಹಾಲು ಉತ್ಪಾದನೆ ಪ್ರಶಸ್ತಿ, ದಾಸರಹಳ್ಳಿಯ ನಾಗೇಂದ್ರ ಅವರಿಗೆ ಅತ್ಯುತ್ತಮ ಗುಂಪು ಕೃತಕ ಗರ್ಭಧಾರಣೆ, ಲಕ್ಕೊಂಡಹಳ್ಳಿಯ ಶ್ರೀನಿವಾಸ್ ಅವರಿಗೆ ಅತ್ಯುತ್ತಮ ಒಂಟಿ ಕೃತಕ ಗರ್ಭಧಾರಣೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಕೂ್ಕಟದ ಕಲ್ಯಾಣ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ಹಾಗೂ ಜನಶ್ರೀ ಬಿಮಾ ಯೋಜನೆ ಅಡಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಗುರುಲಿಂಗಯ್ಯ, ಪ್ರಧಾನ ವ್ಯವಸ್ಥಾಪಕ ಡಾ.ಕೃಷ್ಣಾರೆಡ್ಡಿ, ನಿರ್ದೇಶಕ ರಾದ ಮುನಿಸುಬ್ಬಯ್ಯ, ಜಯಣ್ಣ,ಡಾ.ಸಿ.ಕೆ.ರಾಘವನ್ ಉಪಸ್ಥಿತರಿದ್ದರು.