ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಆಸ್ಪತ್ರೆಗಳಿಗೆ ಹಣ ಬಿಡುಗಡೆ ಮಾಡಲು ವಿಳಂಬ ಮಾಡುವ ವಿಮಾ ಕಂಪನಿಗಳಿಗೆ ದಂಡ ವಿಧಿಸಲು ಕೇಂದ್ರ ಚಿಂತನೆ ನಡೆಸಿದೆ.
ಆಸ್ಪತ್ರೆಗಳ ಹಣ ಬಿಡುಗಡೆ ಕ್ಲೇಮುಗಳ ಇತ್ಯರ್ಥಗೊಳಿಸಲು ವಿಮಾ ಕಂಪನಿಗಳಿಗೆ ಗರಿಷ್ಠ 15 ದಿನಗಳ ಗಡುವು ನೀಡಲಾಗಿದೆ. ಇಲ್ಲದಿದ್ದರೆ ಪಾವತಿಸಬೇಕಾದ ಹಣದ ಶೇಕಡಾ ಒಂದರಷ್ಟು ಬಡ್ಡಿಯನ್ನು ಪ್ರತಿವಾರದ ಲೆಕ್ಕದಲ್ಲಿ ವಿಮಾ ಕಂಪನಿಗಳು ದಂಡ ತೆರಬೇಕಾಗುತ್ತದೆ. ದಂಡದ ಹಣವನ್ನು ನೇರವಾಗಿ ಆಸ್ಪತ್ರೆಗೆ ಪಾವತಿಸಬೇಕಾಗುತ್ತದೆ.
ಈ ಸಂಬಂಧ ಕೇಂದ್ರ ಸರ್ಕಾರ ಮಾದರಿ ಗುತ್ತಿಗೆ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದು, ಚಿಕಿತ್ಸೆಗಳ ಪಟ್ಟಿ ಮತ್ತು ಅದಕ್ಕೆ ತಗಲುವ ವೆಚ್ಚ ಸೇರಿದಂತೆ ಅನೇಕ ವಿವರಗಳನ್ನು ಒಳಗೊಂಡಿದೆ. ಯೋಜನೆಯ ಅನುಷ್ಠಾನಕ್ಕೆ 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಪ್ಪಿಗೆ ಸೂಚಿಸಿವೆ.