ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಕಸಿ: ರೋಗಿಯ ಆರೋಗ್ಯ ಚೇತರಿಕೆ

ಬೆಂಗಳೂರಿನಿಂದ ಕೋಲ್ಕೊತ್ತಕ್ಕೆ ರವಾನೆಯಾಗಿದ್ದ ಹೃದಯ
Last Updated 22 ಮೇ 2018, 19:57 IST
ಅಕ್ಷರ ಗಾತ್ರ

ಕೋಲ್ಕತ್ತ: ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಾರ್ಖಂಡ್‌ನ ರೋಗಿಯ ಆರೋಗ್ಯ ಚೇತರಿಸಿಕೊಂಡಿದೆ ಎಂದು ವೈದ್ಯರು ಮಂಗಳವಾರ ತಿಳಿಸಿದ್ದಾರೆ.

ದಿಲ್‌ಚಾಂದ್ ಎಂಬುವರ ಹೃದಯವು ರಕ್ತವನ್ನು ಪಂಪ್ ಮಾಡುವ ಶಕ್ತಿಯನ್ನು ಕಳೆದುಕೊಂಡಿತ್ತು. ಹೀಗಾಗಿ ಬೆಂಗಳೂರಿನ ಆಸ್ಪತ್ರೆಯಿಂದ ರವಾನಿಸಿದ್ದ ಹೃದಯವನ್ನು ಸೋಮವಾರ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು.

ರಸ್ತೆ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಯುವಕನ ಮಿದುಳು ನಿಷ್ಕ್ರಿಯಗೊಂಡಿತ್ತು. ಅಂಗಾಂಗ ದಾನದ ಬಗ್ಗೆ ವೈದ್ಯರು ಯುವಕನ ಕುಟುಂಬದವರ ಮನವೊಲಿಸಿದ್ದರು. ಬೆಂಗಳೂರು ಯುವಕನ ಹೃದಯವನ್ನು ದಿಲ್‌ಚಾಂದ್‌ಗೆ ಅಳವಡಿಸಲು ವೈದ್ಯರು ನಿರ್ಧರಿಸಿದರು.

ಸೋಮವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೋಲ್ಕತ್ತಕ್ಕೆ ಹೃದಯವನ್ನು ರವಾನೆ ಮಾಡಲಾಯಿತು. ಕೋಲ್ಕತ್ತದ ಪೊಲೀಸರು ಗ್ರೀನ್‌ ಕಾರಿಡಾರ್ ವ್ಯವಸ್ಥೆ ಮಾಡಿ, ಹೃದಯವು ಆದಷ್ಟು ಬೇಗ ಆಸ್ಪತ್ರೆಯನ್ನು ತಲುಪಲು ನೆರವಾದರು.

ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಹೃದಯವನ್ನು ಜೋಡಿಸಲಾಯಿತು. ಜೀವಂತ ಹೃದಯವನ್ನು ಒಂದೂವರೆ ಸಾವಿರ ಕಿಲೋಮೀಟರ್ ದೂರದವರೆಗೆ ರವಾನಿಸಿದ್ದು ಅಪರೂಪದ ಪ್ರಕರಣ. ಬೆಂಗಳೂರು ಹಾಗೂ ಕೋಲ್ಕತ್ತದ ಎರಡೂ ಆಸ್ಪತ್ರೆಗಳ ವೈದ್ಯರ ಸಮನ್ವಯದಿಂದ ಇದು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT