ಅಫಜಲಪುರ: ಎಸ್.ಸಿ, ಎಸ್.ಟಿ ರೈತರಿಗೆ ಕೃಷಿ ಪರಿಕರ ಖರೀದಿ ಮಾಡಲು ಸರ್ಕಾರದಿಂದ ಸಹಾಯ ಧನ ಬಾರದೆ ಇರುವುದರಿಂದ ರೈತರು ನೀಡಿರುವ ಸಹಾಯ ಧನದ ಅರ್ಜಿಗಳು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ವರ್ಷಗಳಿಂದ ದೂಳು ತಿನ್ನುತ್ತಿವೆ.
ಕೃಷಿ ಇಲಾಖೆಯಿಂದ ಪ್ರತಿ ವರ್ಷ ಶೇ 90ರಷ್ಟು ಸಹಾಯ ಧನದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಟ್ರ್ಯಾಕ್ಟರ್ ಮತ್ತು ಬಿತ್ತುವ ಯಂತ್ರ, ಮೇವು ಕತ್ತರಿಸುವ ಯಂತ್ರ ಸೇರಿದಂತೆ ಕೃಷಿ ಪರಿಕರಗಳನ್ನು ನೀಡಲಾಗುತ್ತದೆ. ಸರ್ಕಾರ ರೈತರ ಬೇಡಿಕೆಗೆ ತಕ್ಕಂತೆ ಸಹಾಯ ಧನ ನೀಡುತ್ತಿಲ್ಲ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾನ ದುರ್ಬಳಿಕೆಯಾಗುತ್ತಿದೆ. ಮೊದಲು ಅರ್ಜಿ ನೀಡಿದವರಿಗೆ ಆದ್ಯತೆ ಮೇಲೆ ಕೃಷಿ ಪರಿಕರ ನೀಡಬೇಕು ಎಂದು ಗೌರ(ಬಿ) ಗ್ರಾಮದ ಭೀಮರಾವ್ ಗೌರ ಆಗ್ರಹಿಸಿದರು.
ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಸರ್ದಾರಭಾಷಾ ನದಾಫ್ ಮಾಹಿತಿ ನೀಡಿ, ಒಂದು ವರ್ಷದಿಂದ ಸಹಾಯಧನ ಬಿಡುಗಡೆಯಾಗಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಆದ್ಯತೆ ಪ್ರಕಾರ ರೈತರಿಗೆ ಕೃಷಿ ಪರಿಕರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.