ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ನೌಕರರ ಮುಷ್ಕರ ಆರಂಭ

Last Updated 22 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ  ಮತ್ತು ಖಂಡೇಲ್‌ವಾಲ್ ಸಮಿತಿ ಶಿಫಾರಸು ಜಾರಿ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರು ಬುಧವಾರದಿಂದ ಎರಡು ದಿನಗಳ ಮುಷ್ಕರ ಆರಂಭಿಸಿದ್ದಾರೆ.

ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು, ಎಟಿಎಂಗಳು ಎಂದಿನಂತೆ ಕಾರ್ಯನಿರ್ವಸುತ್ತಿವೆ. ಸರ್ಕಾರಿ ಸ್ವಾಮ್ಯದ ಒಂಬತ್ತು ಬ್ಯಾಂಕುಗಳ ಅಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ ಸಂಘಟನೆಯಾಗಿರುವ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಮುಷ್ಕರಕ್ಕೆ ಕರೆ ನೀಡಿದೆ.

ಬ್ಯಾಂಕುಗಳಲ್ಲಿ ಮಾನವ ಸಂಪನ್ಮೂಲದ ಬಳಕೆ ಕುರಿತು ಖಂಡೇಲ್‌ವಾಲ್ ಸಮಿತಿ ಸಲ್ಲಿಸಿರುವ ಶಿಫಾರಸನ್ನು ಏಕಪಕ್ಷೀಯವಾಗಿ ಜಾರಿಗೊಳಿಸುತ್ತಿರುವುದು ಮತ್ತು ಸುಧಾರಣೆ ತರಲು ಮುಂದಾಗಿರುವುದನ್ನು ವಿರೋಧಿಸಿ ಈ ಮುಷ್ಕರ ನಡೆಸಲಾಗುತ್ತಿದೆ.

`ಬುಧವಾರ ಬೆಳಿಗ್ಗೆಯಿಂದ ಮುಷ್ಕರ ಆರಂಭಿಸಲಾಗಿದೆ. ಸುಮಾರು 10 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ 24 ಸರ್ಕಾರಿ ಸ್ವಾಮ್ಯದ, 12 ಖಾಸಗಿ  ಮತ್ತು 6 ವಿದೇಶಿ ಬ್ಯಾಂಕುಗಳ ಉದ್ಯೋಗಿಗಳು ಸೇರಿದ್ದಾರೆ~ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.

ಎಟಿಎಂಗಳಲ್ಲಿ ಹಣ ಇರುವವರೆಗೆ ಮಾತ್ರ ಅವುಗಳು ಕೆಲಸ ನಿರ್ವಹಿಸಲಿವೆ. ಆ ಬಳಿಕ ಆ ಸೇವೆ ಕೂಡ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.

ಪಿಂಚಣಿ, ಗೃಹ ಸಾಲ ಪರಿಷ್ಕರಣೆ, ಕೆಲಸದ ಅವಧಿಯನ್ನು ಐದು ದಿನಗಳಿಗೆ ಸೀಮಿತಗೊಳಿಸುವುದು ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ವಿಷಯಗಳು ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾಗಿವೆ ಎಂದು ಎಸ್‌ಬಿಐ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಅಗರವಾಲ್ ತಿಳಿಸಿದ್ದಾರೆ.

ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ 87,000 ಶಾಖೆಗಳಿವೆ. ಇದರಲ್ಲಿ 10 ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 63,000 ಎಟಿಎಂಗಳಿದ್ದು, ದೇಶದಾದ್ಯಂತ ಶೇ 75ರಷ್ಟು ಬ್ಯಾಂಕಿಂಗ್ ಉದ್ದಿಮೆಯನ್ನು ಇವುಗಳು ನಿಯಂತ್ರಿಸುತ್ತಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಖಾಸಗಿ ವಲಯದ ಐಸಿಐಸಿಐ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ವಿದೇಶಿ ಬ್ಯಾಂಕ್‌ಗಳು ಮಾಮೂಲಿನಂತೆ ಕಾರ್ಯವನ್ನು ನಿರ್ವಹಿಸುತ್ತಿವೆ.

2011ರ  ತಿದ್ದುಪಡಿ ಮಸೂದೆಯು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಷೇರುದಾರರ ಮತದಾನದ ಹಕ್ಕನ್ನು ಶೇ 10ರಿಂದ 26ಕ್ಕೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿಗಳು ಮತ್ತು ಗುಮಾಸ್ತರಿಗೆ ಕಂಪ್ಯೂಟರ್ ಜ್ಞಾನ ಹೊಂದುವುದನ್ನು ಕಡ್ಡಾಯಗೊಳಿಸಬೇಕು. ಗುಮಾಸ್ತ ಹುದ್ದೆಗೆ ಪದವಿ ಕಡ್ಡಾಯ ಮಾಡುವುದು ಸೇರಿ ಹಲವು ಶಿಫಾರಸುಗಳನ್ನು ಖಂಡೇಲ್‌ವಾಲ್ ಸಮಿತಿ ಮಾಡಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮುಷ್ಕರ ಆರಂಭಿಸಿರುವುದರಿಂದ ವರ್ತಕರು ಸೇರಿದಂತೆ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT