ಲಖನೌ: ಭಾರತದ ಆರ್ಥಿಕತೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಕೇಂದ್ರ ಬಜೆಟ್ ಒಂದು ಮೈಲಿಗಲ್ಲು ಎಂಬುದು ಸಾಬೀತಾಗಲಿದೆ. ಈ ಬಜೆಟ್ನಲ್ಲಿ ಎಲ್ಲಾ ವರ್ಗಗಳ ಅಭಿವೃದ್ಧಿಯನ್ನು ಗಮನದಲ್ಲಿಡಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದರು.
‘ಈ ಬಜೆಟ್ ಸಾರ್ವಜನಿಕ ಕಲ್ಯಾಣ ಮತ್ತು ‘ಆತ್ಮನಿರ್ಭರ ಭಾರತ’ದ ಆಶಯಗಳಿಗೆ ತಕ್ಕಂತಿದೆ. ಬಜೆಟ್ನಲ್ಲಿ ರೈತರು, ಮಧ್ಯಮ ವರ್ಗ, ಬಡವರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗಗಳ ಜನರ ಏಳಿಗೆಯನ್ನು ಗಮನದಲ್ಲಿಡಲಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಇದು ಭಾರತದ ಆರ್ಥಿಕತೆಯನ್ನು ಹಾದಿಗೆ ತರಲಿದೆ ಮತ್ತು ದೇಶದ ಪ್ರತಿಯೊಂದು ಪ್ರಜೆಯನ್ನು ಆರ್ಥಿಕವಾಗಿ ಸಬಲಗೊಳಿಸಲಿದೆ. ಜಾಗತಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅಭಿವೃದ್ಧಿ ಕೇಂದ್ರಿತ ಐತಿಹಾಸಿಕ ಬಜೆಟ್ ಅನ್ನು ಪ್ರಸ್ತುತ ಪಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಅಭಿನಂದನೆಗಳು. ಈ ಬಜೆಟ್ ಎಲ್ಲಾ ಭಾರತೀಯರ ಆರ್ಥಿಕ ನಿರೀಕ್ಷೆಯನ್ನು ಪೂರೈಸಲಿದೆ’ ಎಂದು ಅವರು ಟ್ವಿಟರ್ನಲ್ಲಿ ಹೇಳಿದ್ದಾರೆ.
‘ಈ ಬಜೆಟ್ ಅನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಅರ್ಪಿಸಲಾಗಿದೆ. ಈ ಬಜೆಟ್ನಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ’ ಎಂಬ ತತ್ವವನ್ನು ಎತ್ತಿ ಹಿಡಿಯಲಾಗಿದೆ. ಇದು ‘ಹೊಸ ಭಾರತ’ದ ‘ಹೊಸ ಆರ್ಥಿಕತೆ’ಯ ಬಜೆಟ್ ಆಗಿದೆ’ ಎಂದು ಅವರು ಹೇಳಿದ್ದಾರೆ.