ನವದೆಹಲಿ: ದೇಶದಲ್ಲಿ 2047ರ ಒಳಗೆ ರಕ್ತಹೀನತೆ ಕಾಯಿಲೆ ನಿರ್ಮೂಲನೆಗೆ ‘ಮಿಷನ್ ಟು ಸಿಕಲ್ ಸೆಲ್ ಅನಿಮೀಯಾ’ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ಈ ಯೋಜನೆಯಡಿ, ರಕ್ತಹೀನತೆ ಕಾಯಿಲೆ ಪೀಡಿತ ಗಿರಿಜನ ಪ್ರದೇಶಗಳಲ್ಲಿ 40 ವರ್ಷದವರೆಗಿನ ಒಟ್ಟು 7 ಕೋಟಿ ಜನರನ್ನು ತಪಾಸಣೆ ನಡೆಸುವ ಮತ್ತು ಜಾಗೃತಿ ಮೂಡಿಸುವ ಗುರಿ ಇದೆ.
ಅಲ್ಲದೆ, ಈ ಬಾರಿ ಆರೋಗ್ಯ ವಲಯಕ್ಕೆ ಕಳೆದ ಬಾರಿಗಿಂತ (₹79,145 ಕೋಟಿ) ಶೇ 13ರಷ್ಟು ಅನುದಾನ ಹೆಚ್ಚಿಸಿದ್ದು, ಇದರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ₹86,175 ಕೋಟಿ, ಆರೋಗ್ಯ ಸಂಶೋಧನಾ ಇಲಾಖೆಗೆ ₹2,980 ಕೋಟಿ ಹಂಚಿಕೆ ಮಾಡಲಾಗಿದೆ.
ಆಯುಷ್ ಸಚಿವಾಲಯಕ್ಕೆ ಈ ಬಾರಿ ಶೇ 28ರಷ್ಟು ಅನುದಾನ ಹೆಚ್ಚಿಸಲಾಗಿದೆ.
* ಜಂಟಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಲು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು, ಖಾಸಗಿ ವಲಯದ ಸಂಶೋಧಕರು ಮತ್ತು ಅಭಿವೃದ್ಧಿ ತಂಡಗಳಿಗೆ ಸಂಶೋಧನೆಗೆ ಆಯ್ದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಯೋಗಾಲಯಗಳಲ್ಲಿ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಹಣಕಾಸು ಸಚಿವರು ತಿಳಿಸಿದರು