ನವದೆಹಲಿ: ಬ್ಯಾಂಕಿಂಗ್ ವಲಯದಲ್ಲಿನ ವಸೂಲಾಗದ ಸಾಲವನ್ನು (ಎನ್ಪಿಎ) ವಹಿಸಿಕೊಳ್ಳಲು ಖಾಸಗಿ ವಲಯದ ಮುಂದಾಳತ್ವದಲ್ಲಿ ‘ಬ್ಯಾಡ್ ಬ್ಯಾಂಕ್’ ಸ್ಥಾಪಿಸುವ ಅಗತ್ಯ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.
‘ಬ್ಯಾಡ್ ಬ್ಯಾಂಕ್’ ಸ್ಥಾಪಿಸುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಎದುರು ಕೆಲವು ಕಾಲದಿಂದ ಇದೆ. ಸೋಮವಾರ ಮಂಡನೆ ಆಗಲಿರುವ ಬಜೆಟ್ ಈ ನಿಟ್ಟಿನಲ್ಲಿ ಕೆಲವು ಘೋಷಣೆಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ.
ಬ್ಯಾಂಕ್ಗಳ ವಸೂಲಾಗದ ಸಾಲವನ್ನು ವಹಿಸಿಕೊಂಡು, ಅಂತಹ ಸಾಲ ವಸೂಲಾತಿ ವಿಚಾರವಾಗಿ ಮುಂದಿನ ಕ್ರಮಗಳನ್ನು ‘ಬ್ಯಾಡ್ ಬ್ಯಾಂಕ್’ ತಾನು ಕೈಗೊಳ್ಳುತ್ತದೆ. ಬ್ಯಾಂಕ್ಗಳ ಮೇಲೆ ಇರುವ ಎನ್ಪಿಎ ಹೊರೆಯನ್ನು ತಗ್ಗಿಸಿಕೊಳ್ಳಲು ಬ್ಯಾಡ್ ಬ್ಯಾಂಕ್ ಸ್ಥಾಪನೆ ಅಗತ್ಯ ಎಂದು ಹಲವು ಬ್ಯಾಂಕ್ಗಳ ಪ್ರಮುಖರು ಪ್ರತಿಪಾದಿಸಿದ್ದಾರೆ.
ಸಿಬಿಐ, ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ) ಮತ್ತು ಸಿಎಜಿ ಬಗ್ಗೆ ಇರುವ ಭೀತಿಯ ಕಾರಣದಿಂದಾಗಿ, ಕೆಟ್ಟ ಸಾಲಗಳ ವಿಚಾರದಲ್ಲಿ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಲು ಹಿಂದೇಟು ಹಾಕುವುದಿದೆ ಎಂದೂ ಸುಬ್ರಮಣಿಯನ್ ಹೇಳಿದ್ದಾರೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಜನವರಿ ತಿಂಗಳ ಆರಂಭದಲ್ಲಿ, ಎನ್ಪಿಎ ಸಮಸ್ಯೆ ನಿಭಾಯಿಸಲು ಬ್ಯಾಡ್ ಬ್ಯಾಂಕ್ ಆರಂಭಿಸುವುದನ್ನು ಪರಿಗಣಿಸಬಹುದು ಎಂದು ಹೇಳಿದ್ದರು. ‘ಬ್ಯಾಡ್ ಬ್ಯಾಂಕ್ ಆರಂಭಿಸುವ ಪ್ರಸ್ತಾವನೆ ಬಂದರೆ ಆರ್ಬಿಐ ಅದನ್ನು ಪರಿಶೀಲಿಸಲಿದೆ’ ಎಂದು ದಾಸ್ ಹೇಳಿದ್ದರು.