<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026–27ನೇ ಸಾಲಿನ ರಾಜ್ಯ ಬಜೆಟ್ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<blockquote>ರೈತರಿಗೆ ಸಮಾಧಾನ ತರದ ಬಜೆಟ್</blockquote>.<p>ಬಜೆಟ್ನಲ್ಲಿ ರೈತರಿಗೆ ಸಮಾಧಾನ ಆಗುವಂಥ ಯಾವುದೇ ಯೋಜನೆ ಕೊಟ್ಟಿಲ್ಲ. ಕೃಷಿಗೆ ₹ 8,348 ಕೋಟಿ ಘೋಷಿಸಿದ್ದಾರೆ. ಇದರಲ್ಲಿ ಕೃಷಿ ಮತ್ತು ತೋಟಗಾರಿಕೆ ಎರಡನ್ನೂ ಸೇರಿಸಿದ್ದು ಸರಿಯಲ್ಲ.</p><p>ಗೃಹಲಕ್ಷ್ಮಿ ಮಾದರಿಯಲ್ಲಿ ವಯಸ್ಸಾದ ರೈತರಿಗೆ ತಲಾ ₹5 ಸಾವಿರ ತಿಂಗಳ ನೆರವು ಕೇಳಲಾಗಿತ್ತು. ಪ್ರಕೃತಿ ವಿಕೋಪದಿಂದ ಆಗುವ ಹಾನಿ ಭರಿಸಲು ₹10 ಸಾವಿರ ಕೋಟಿ ಆವರ್ತನಿಧಿ, ಕಬ್ಬಿಗೆ ಪ್ರೋತ್ಸಾಹ ಧನ ನೀಡಲು ₹1 ಸಾವಿರ ಕೋಟಿ ಇಡಗಂಟು ಇಡಲು ಕೋರಲಾಗಿತ್ತು. ಯಾವುದನ್ನೂ ಪರಿಗಣಿಸಿಲ್ಲ. </p><p>ಕಳಪೆ ಬೀಜ ಮತ್ತು ಗೊಬ್ಬರದ ಹಾವಳಿ ತಪ್ಪಿಸಲು ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಹಾನಿಯಾದ ಬಳಿಕ ವರದಿ ಕೊಡುತ್ತದೆ ಹೊರತು; ಹಾನಿ ತಡೆಯುವುದಿಲ್ಲ. ಬೆಳೆವಿಮೆ ಪರಿಹಾರಕ್ಕೆ ₹6,638 ಕೋಟಿ ನೀಡಿದ್ದಾರೆ. ಖಾಸಗಿ ಕಂಪನಿಗಳಿಗೆ ಹಣ; ರೈತರ ಬಾಯಿಗೆ ಮಣ್ಣು ಎನ್ನುವಂತಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಈ ವಿಮೆ ವಿತರಿಸಬೇಕು ಎಂಬ ರೈತರ ದಶಕದ ಬೇಡಿಕೆ ಈಡೇರಿಸಿಲ್ಲ. ಜನರ ರಂಜನೆಗೆ ‘ಗ್ಯಾರಂಟಿ’ ಯೋಜನೆ ನೀಡುತ್ತಾರೆ. ಆದರೆ, ಬದುಕಲು ಬೇಕಾದ ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ಕುಕ್ಕುಟೋದ್ಯಮ ಇಂಥವುಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರ ಬಹಳ ಕ್ಷೀಣಿಸಿದೆ. ಬಾಯಾರಿದವರಿಗೆ ನೀರು ಕೊಡಬೇಕು, ತೀರ್ಥ ಕೊಟ್ಟರೆ ಏನು ಪ್ರಯೋಜನ?</p><p><em>– ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ– ಕರ್ನಾಟಕ</em></p>.<blockquote>ನಗರಾಭಿವೃದ್ಧಿ ಬೆಂಗಳೂರಿಗಷ್ಟೇ ಆದ್ಯತೆ</blockquote>.<p>ಹನ್ನೊಂದು ಆರ್ಥಿಕ ಆದ್ಯತೆಗಳ ಮೇಲೆ ನಡೆದಿರುವ ರಾಜ್ಯ ಸರ್ಕಾರವು ನಗರಾಭಿವೃದ್ಧಿಗೆ ಸಂಬಂಧಿಸಿ, ನಗರ ಕೇಂದ್ರಿತ ಸುಸ್ಥಿರ ಅಭಿವೃದ್ಧಿಯನ್ನೇ ಆದ್ಯತೆಯಾಗಿರಿಸಿ ಕೊಂಡಿರುವುದು ಕಾಣುತ್ತದೆ. ಬೆಂಗಳೂರು ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನೂ ಬಜೆಟ್ ನೀಡಿದೆ. ಇತರೆ ನಗರಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬಹುದಾಗಿತ್ತು.</p><p>ವಸತಿ ವಲಯದಲ್ಲಿ ಹಿಂದಿನ ಸರ್ಕಾರವು ಅನುದಾನ ನೀಡದೆ ಮಂಜೂರಾತಿ ನೀಡಿದ್ದ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿರುವುದು ಈಗಿನ ಸರ್ಕಾರದ ಉತ್ತಮ ಹೆಜ್ಜೆ.</p><p>ಕೆಎಚ್ಬಿ ವತಿಯಿಂದ ವರ್ಷದಲ್ಲಿ 50 ಸಾವಿರ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕ್ರಮ ಬಡವರಿಗೆ ನೆರವಾಗಲಿದೆ. ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಪ್ರಕಟಿಸಿರುವುದು ಸ್ವಾಗತಾರ್ಹ.</p><p>ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 1 ಲಕ್ಷ ಫಲಾನುಭವಿಗಳಿಗೆ ನೆರವು ನೀಡುವ ಹೊಸ ಗುರಿಯನ್ನೂ ಸೇರಿಸಿರುವುದು ವಿಶೇಷ. ಇದರಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನ ವನ್ನು ₹1.20 ಲಕ್ಷದಿಂದ ₹2 ಲಕ್ಷಕ್ಕೆ, ಪರಿಶಿಷ್ಟರಿಗೆ ನೀಡುವ ಸಹಾಯಧನವನ್ನು ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಿರುವುದು, ಸ್ವಂತ ಮನೆ ಹೊಂದಬೇಕೆಂಬುವವರಲ್ಲಿ ಹೊಸ ಭರವಸೆ ಮೂಡಿಸುತ್ತದೆ. ವಸತಿ ಯೋಜನೆಯ ಸಾಮರ್ಥ್ಯವೂ ಹೆಚ್ಚಾಗಿದೆ.</p><p><em>– ಪ್ರೊ.ನವಿತಾ ತಿಮ್ಮಯ್ಯ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು, ಮೈಸೂರು ವಿಶ್ವವಿದ್ಯಾಲಯ</em></p>.<blockquote>ಹೊಸ ಯೋಜನೆಗಿಲ್ಲ ಆಸಕ್ತಿ: ಹಾಲಿ ಯೋಜನೆಗೆ ‘ಶಕ್ತಿ’</blockquote>.<p>ಬಜೆಟ್ನಲ್ಲಿ ಮಹಿಳೆಯರಿಗಾಗಿ ಹೊಸ ಯೋಜನೆಗಳು ಹೆಚ್ಚು ಕಾಣಿಸದಿದ್ದರೂ, ಸಾಮಾನ್ಯ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡಿದ ಗೃಹಲಕ್ಷ್ಮಿ, ಶಕ್ತಿ ಮುಂತಾದವುಗಳನ್ನು ಮುಂದುವರಿಸಿರುವುದು ಒಳ್ಳೆಯ ಕ್ರಮ.</p><p>ಮಹಿಳೆಯರ ಆರೋಗ್ಯ, ಪೌಷ್ಟಿಕತೆ, ರಕ್ಷಣೆ, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೃಷಿಕ ಮಹಿಳೆಯರಿಗೆ ತರಬೇತಿ, ಪರಿಶಿಷ್ಟ ಜಾತಿ, ಪಂಗಡದ ಉದ್ಯೋಗಸ್ಥರಿಗೆ ವಸತಿ ನಿಲಯ, ಸರಿಯಾಗಿ ಸಾಲ ಮರುಪಾವತಿಸುವ ಸ್ವ ಸಹಾಯ ಸಂಘಗಳಿಗೆ ಬೆಂಬಲ, ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ಮಹಿಳೆಯರಿಗೆ ವೃದ್ಧಾಶ್ರಮ, ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕಿಯರಿಗೆ ಮಾತೃತ್ವ ರಜೆ ಕ್ರಮಗಳು ಪ್ರಯೋಜನಕಾರಿ. ಆದರೆ, ಇದರಲ್ಲಿ ಹೆಚ್ಚಿನ ಸೌಲಭ್ಯಗಳು ಮಹಿಳೆಯರು ಸಹಜವಾಗಿ ಪಡೆಯಬೇಕಾದ್ದ ಹಕ್ಕುಗಳಾಗಿದ್ದು, ಇನ್ನಷ್ಟು ಹೆಚ್ಚಿನ ವ್ಯಾಪ್ತಿ ಹೊಂದಬೇಕು. ಗ್ರಾಮೀಣ ಮಹಿಳೆಯರಿಗೆ ಕೌಶಲ ಒದಗಿಸಿ, ಸ್ಥಳೀಯವಾಗಿ ಉದ್ಯೋಗ ಒದಗಿಸುವ ಯೋಜನೆಗಳು ಅಗತ್ಯ.</p><p>ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದರಿಂದ, ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಯೋಜನೆಗಳನ್ನು ರೂಪಿಸಬೇಕಾಗಿದೆ.</p><p>ಅಂಗನವಾಡಿ ಬಲಪಡಿಸುವಿಕೆ, ಸರ್ಕಾರಿ ಶಾಲೆಗಳ ಉನ್ನತೀಕರಣ, ಮಾದಕ ವಸ್ತು ನಿಯಂತ್ರಣಕ್ಕೆ ಒತ್ತು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಶ್ಲಾಘನೀಯ. ಜೀವನ ಕೌಶಲ, ಪರಿಸರ ಪ್ರೀತಿ, ಮಾನವೀಯ ಮೌಲ್ಯಗಳು ಮೊದಲಾದ ಮಕ್ಕಳ ಬೆಳವಣಿಗೆಯ ಭಾಗವಾಗುವಂತಹ ಯೋಜನೆಗಳು ರೂಪುಗೊಳ್ಳಲಿ.</p><p><em>–ಮಮತಾ ರೈ, ಕದಿಕೆ ಟ್ರಸ್ಟ್, ಉಡುಪಿ</em></p>.<blockquote>ಮಾನವ ಅಭಿವೃದ್ಧಿಗೂ ಪ್ರಾಶಸ್ತ್ಯ</blockquote>.<p>ನಗರ ಪ್ರದೇಶ ಅಲ್ಲದೇ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಸೇತುವೆ, ಸೇತುವೆ ದುರಸ್ತಿ, ಕಾಲುಸಂಕಗಳ ನಿರ್ಮಾಣ ಕಾಮಗಾರಿಗೆ ₹200 ಕೋಟಿ ಅನುದಾನ ಘೋಷಣೆಯು ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುತ್ತದೆ. ಇದರಿಂದ ಮಲೆನಾಡು, ಕರಾವಳಿ ಪ್ರದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.</p><p>ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ ನಿರ್ಮಾಣಕ್ಕೆ ₹5,776 ಕೋಟಿ ವೆಚ್ಚ ಮಾಡುವು ದಾಗಿ ತಿಳಿಸಲಾಗಿದೆ. ಇದು ಜಿಲ್ಲೆ ಮತ್ತು ತಾಲ್ಲೂಕುಗಳ ನಡುವೆ ಸಂಪರ್ಕ ಕಲ್ಪಿಸಲು ಸುಲಭವಾಗಿ, ಆರ್ಥಿಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬಹುದು. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುವ ಬದಲು, 2 ಮತ್ತು 3ನೇ ಹಂತದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿತ್ತು. ಬೆಂಗಳೂರಿನಲ್ಲೇ ಎರಡನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಮುಂದಾಗಿದ್ದು ಅನಗತ್ಯ. ಬೆಂಗಳೂರು ಜನದಟ್ಟಣೆಯಿಂದ ನರಳುತ್ತಿದೆ. ಸಾಕಷ್ಟು ಮೂಲಸೌಕರ್ಯಗಳ ಯೋಜನೆಗಳು ಅಲ್ಲಿವೆ. ಅದೇ ವಿಮಾನ ನಿಲ್ದಾಣ ಬೇರೆ ಭಾಗದಲ್ಲಿ ನಿರ್ಮಾಣವಾದರೆ ಪ್ರಾದೇಶಿಕ ಅಸಮತೋಲನ ದೂರವಾಗುತ್ತಿತ್ತು.</p><p>ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರ– ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ. ಆದರೆ, ವನ್ಯ, ಸಸ್ಯ, ಜಲಸಂಪತ್ತಿಗೆ ಧಕ್ಕೆಯಾಗಬಾರದು. ಇದೇ ಜಿಲ್ಲೆಯಲ್ಲಿ ಬಹುತೇಕ ಕಡೆ ಸುಸಜ್ಜಿತ ರಸ್ತೆ ಮತ್ತು ಮೂಲಸೌಕರ್ಯಗಳೂ ಇಲ್ಲ.</p><p><em>– ವಿಕಾಸ ಸೊಪ್ಪಿನ, ಮಾರುಕಟ್ಟೆ ಸಲಹೆಗಾರ, ಹುಬ್ಬಳ್ಳಿ</em></p>.<blockquote>ಹೂಡಿಕೆ ಪ್ರೋತ್ಸಾಹಕ್ಕೆ ಪೂರಕ</blockquote>.<p>ಬಜೆಟ್ನಲ್ಲಿ ಘೋಷಿಸಲಾದ ಹಲವು ಕ್ರಮಗಳು ಕೈಗಾರಿಕೋದ್ಯಮಿಗಳ ವಿಶ್ವಾಸ ಹೆಚ್ಚಿಸಿವೆ. ಎಂಎಸ್ಎಂಇ ವಲಯಕ್ಕೆ ಬೆಂಬಲ ನೀಡಿರುವುದು ಉದಯೋನ್ಮುಖ ತಂತ್ರಜ್ಞಾನಕ್ಕೆ ಉತ್ತೇಜನಕಾರಿ ಆಗಿದೆ ಮತ್ತು ರಾಜ್ಯದಾದ್ಯಂತ ಹೂಡಿಕೆಯನ್ನು ಪ್ರೋತ್ಸಾಹಿಸಲು ಪೂರಕವಾಗಿದೆ.</p><p>ಬೆಂಗಳೂರಿನ ಆಚೆಗೆ, 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸರ್ಕಾರದ ಕ್ರಮ ಶ್ಲಾಘನೀಯ. ಮಂಡ್ಯದಲ್ಲಿ ಸುಮಾರು ₹500 ಕೋಟಿ ಹೂಡಿಕೆಯೊಂದಿಗೆ ‘ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ ಸ್ಥಾಪಿಸುವ ಪ್ರಸ್ತಾವನೆಯು ಕರ್ನಾಟಕದ ವಾಹನ ಉದ್ಯಮವನ್ನು ಬಲಪಡಿಸಲಿದೆ.</p><p>ವಾಹನ ಗುಜರಿ ಕೇಂದ್ರದ ಸ್ಥಾಪನೆಯಿಂದ ಮಾಲಿನ್ಯ ನಿಯಂತ್ರಣ, ಮರುಬಳಕೆ ಹಾಗೂ ಆಟೊಮೊಬೈಲ್ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ. ಬೆಳಗಾವಿಯಲ್ಲಿ ಸಾವಿರ ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಉತ್ತೇಜನ ನೀಡುತ್ತದೆ ಮತ್ತು ಉದ್ಯೋಗ ಅವಕಾಶ ಹೆಚ್ಚಿಸುತ್ತದೆ.</p><p>ವೈಮಾಂತರಿಕ್ಷ ಮತ್ತು ರಕ್ಷಣಾ ವಲಯ ಕೇಂದ್ರೀಕರಿಸಿ ಮೈಸೂರಿನಲ್ಲಿ ಪ್ರತ್ಯೇಕ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಕರ್ನಾಟಕವನ್ನು ಈ ವಲಯದ ಪ್ರಮುಖ ಕೇಂದ್ರವನ್ನಾಗಿಸಲು ಸಾಧ್ಯವಾಗಲಿದೆ. ಮೈಸೂರನ್ನು ಎರಡನೇ ಐ.ಟಿ ನಗರವಾಗಿ ಅಭಿವೃದ್ಧಿಪಡಿಸುವುದು, ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂದುವರಿಯಲು ನೀಲನಕ್ಷೆಯು ನಾವೀನ್ಯ ಆಧಾರಿತ ಕೈಗಾರಿಕಾ ವಲಯದಲ್ಲಿ ರಾಜ್ಯವನ್ನು ಮುಂಚೂಣಿಗೆ ತೆಗೆದುಕೊಂಡು ಹೋಗಲು ನೆರವಾಗಲಿದೆ. ಪ್ರತ್ಯೇಕ ಎಂಎಸ್ಇ ನೀತಿ ಘೋಷಿಸಬೇಕು. ಉದ್ಯಮಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು.</p><p><em>– ಉಮಾ ರೆಡ್ಡಿ, ಎಫ್ಕೆಸಿಸಿಐ ಅಧ್ಯಕ್ಷೆ</em></p>.<blockquote>ಪ್ರಾದೇಶಿಕ ಯೋಜನೆಗೆ ಬೇಕಿತ್ತು ಗಮನ</blockquote>.<p>ಹಿಂದುಳಿದ ಹಣೆಪಟ್ಟಿ ಹೊತ್ತ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ಹೆಚ್ಚುವರಿಯಾಗಿ ₹5,000 ಕೋಟಿ ಒದಗಿಸಲಾಗಿದೆ. ಜೊತೆಗೆ ರಾಜ್ಯದ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚಗಳಲ್ಲಿ ಕಲ್ಯಾಣದ ವ್ಯಾಪ್ತಿಯ ಪ್ರದೇಶಕ್ಕೂ ಪಾಲು ದೊರೆಯಲಿದೆ.</p><p>ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ ಟ್ರಾಮಾ ಕೇರ್ ಕೇಂದ್ರ, ಗಣಿಬಾಧಿತ ಗ್ರಾಮಗಳಿಗೆ ಆರೋಗ್ಯ ಸೇವೆಗಳ ವಿಸ್ತರಣೆ, ಮುನಿರಾಬಾದ್–ಟಿ.ಬಿ.ಡ್ಯಾಂನಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣ, ಕಲಬುರಗಿಯಲ್ಲಿ ಕ್ರೈಸ್ ವಸತಿ ಶಾಲೆ, ಈ ಪ್ರದೇಶದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೊಪ್ಪಳದಲ್ಲಿ ತಂತ್ರಜ್ಞಾನ ಕೇಂದ್ರ ಘೋಷಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಚನೆಯಾಗಿದ್ದ ಪ್ರೊ.ಎಂ.ಗೋವಿಂದರಾವ್ ಸಮಿತಿ ಶಿಫಾರಸಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ₹4,191 ಕೋಟಿ ನೀಡಲಾಗಿದ್ದು, ಇದು ಈ ಪ್ರದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಲು ಸಹಕಾರಿಯಾಗುವ ನಿರೀಕ್ಷೆಯಿದೆ.</p><p>ಸಂಪೂರ್ಣ ರಾಜ್ಯಕ್ಕೆ ಏಕೀಕೃತ ಕಾರ್ಯಕ್ರಮಗಳಿಗಿಂತಲೂ ಪ್ರದೇಶವಾರು ಸಮಸ್ಯೆಗಳನ್ನು ಗುರುತಿಸಿ ನಿವಾರಣೆಗೆ ಕ್ರಮ ಕೈಗೊಳ್ಳುವುದು ಉತ್ತಮ. ಈ ರೀತಿಯ ಕ್ರಮಕ್ಕೆ ಇನ್ನಷ್ಟು ಒತ್ತು ಕೊಡಬೇಕಿತ್ತು. ಅಸಮಾನತೆಯಿಂದ ಕೂಡಿರುವ ಪ್ರದೇಶಗಳ ನಡುವೆ ಅನುದಾನದ ಸಮಾನ ಹಂಚಿಕೆ ಕೂಡ ಅಸಮಾನತೆಯನ್ನು ಉಲ್ಬಣಗೊಳಿಸುವ ಸಾಧ್ಯತೆಯಿರುತ್ತದೆ. ಬಜೆಟ್ನಲ್ಲಿ ಪ್ರಾದೇಶಿಕವಾರು ಜನಕೇಂದ್ರಿತ ಕಾರ್ಯಕ್ರಮ ಆದ್ಯತೆ ಪಡೆದುಕೊಳ್ಳಬೇಕಿತ್ತು. </p><p><em>– ಜೆ. ಕೃಷ್ಣ, ಗಂಗಾವತಿಯ ಎಸ್ಕೆಎನ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕ</em></p>.<blockquote>ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಒತ್ತು </blockquote>.<p>2026–27ನೇ ಸಾಲಿನ ರಾಜ್ಯ ಬಜೆಟ್ ಪ್ರಾದೇಶಿಕ ಸಮತೋಲನ ಮತ್ತು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.</p><p>ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಶೀತಲಗೃಹ ನಿರ್ಮಾಣ, ಹಾವೇರಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಮತ್ತು ಬೆಳಗಾವಿಯಲ್ಲಿ ಕುರಿ-ಮೇಕೆ ಸಾಕಣೆ ಮತ್ತು ಹೈನುಗಾರಿಕೆಗೆ ಸಹಾಯಧನ ನೀಡುವ ಯೋಜನೆಗಳು ಉಪಯುಕ್ತ ಆಗಿವೆ.</p><p>ಆಲಮಟ್ಟಿ ಅಣೆಕಟ್ಟು ಎತ್ತರಿಸುವುದು ಮತ್ತು ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆಗಳು ಈ ಭಾಗದ ಕೃಷಿ ಸಾಮರ್ಥ್ಯವನ್ನು ವಿಸ್ತರಿಸಲಿವೆ. ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮತ್ತು ಧಾರವಾಡ ಕೈಗಾರಿಕಾ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆ ಮೂಡಿಸಿವೆ.</p><p>ಧಾರವಾಡದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರಗಳ ಸ್ಥಾಪನೆ ಹಾಗೂ ಐಐಟಿ ಧಾರವಾಡ ಸಹಯೋಗದ ಎಐ ಆಧಾರಿತ ಕಲಿಕಾ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಾವಕಾಶ ಒದಗಿಸಲಿವೆ. ಆರೋಗ್ಯ ಕ್ಷೇತ್ರದಲ್ಲಿ ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಜಯದೇವ ಹೃದ್ರೋಗ ಕೇಂದ್ರ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲಿವೆ. ಪ್ರಮುಖ ಪ್ರವಾಸಿ ತಾಣವಾದ ಗದಗ-ಕಪ್ಪತ್ತಗುಡ್ಡ–ಲಕ್ಕುಂಡಿ ಪ್ರವಾಸೋದ್ಯಮ ಸರ್ಕಿಟ್ ಅಭಿವೃದ್ಧಿಪಡಿಸುವುದು ಉತ್ತಮ ಯೋಜನೆಯಾಗಿದೆ.</p><p>ಈ ಎಲ್ಲಾ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾದಲ್ಲಿ, ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ.</p><p><em>– ಪ್ರೊ. ಸುರೇಶ ವಿ. ನಾಡಗೌಡರ, ಗದಗದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿವಿಯ ಪ್ರಭಾರ ಕುಲಪತಿ</em></p>.<blockquote>ಕಾರ್ಮಿಕ ರಂಗಕ್ಕೆ ಅರೆಕಾಸೂ ಇಲ್ಲ</blockquote>.<p>ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್ನಲ್ಲಿ ಅರೆಕಾಸಿನ ನೆರವೂ ಸಿಕ್ಕಿಲ್ಲ. ಮಾಲೀಕ ವರ್ಗವನ್ನು ಓಲೈಸಿದಂತಿದೆ.</p><p>ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಸಂಹಿತೆಗಳು ಜಾರಿಯಾದರೆ ಅಸ್ತಿತ್ವದಲ್ಲಿರುವ ಹಕ್ಕು, ಸೌಲಭ್ಯಗಳು ಅಪಾಯಕ್ಕೆ ಸಿಲುಕಲಿವೆ. ಕೆಲಸದ ಸ್ಥಳಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮ ಹಾಗೂ ಜೀವಗಳ ರಕ್ಷಣೆ ಮಾಡುವ ಬಗ್ಗೆ ಈ ಬಜೆಟ್ ಯಾವ ಭರವಸೆಯನ್ನೂ ನೀಡಿಲ್ಲ. ಕನಿಷ್ಠ ವೇತನ ₹ 33 ಸಾವಿರ ನಿಗದಿಪಡಿಸಬೇಕು ಎಂದು ಹೋರಾಟ ನಡೆಸಿದರೂ ಮುಖ್ಯಮಂತ್ರಿ ಸ್ಪಂದಿಸಿಲ್ಲ.</p><p>ಅಸಂಘಟಿತ 93 ವಲಯಗಳಲ್ಲಿ 2 ಕೋಟಿಗಿಂತ ಅಧಿಕ ಕಾರ್ಮಿಕರಿದ್ದಾರೆ. ಅವರಿಗೆ ಕನಿಷ್ಠ ಪಿಂಚಣಿ, ವೈದ್ಯಕೀಯ, ವಸತಿ ಸಹಿತ ಯಾವುದೇ ಸೌಲಭ್ಯಗಳನ್ನು ನೀಡದೇ ಕೌಶಲಾಭಿವೃದ್ಧಿಗಾಗಿ ‘ಕಾಯಕ’ ಆನ್ಲೈನ್ ಕೇಂದ್ರ ಸ್ಥಾಪಿಸಲು ₹ 5 ಕೋಟಿ ಒದಗಿಸಿರುವುದು ಹಾಸ್ಯಾಸ್ಪದ. ಜಿಟಿಟಿಸಿ ಸ್ಥಾಪಿಸಲು ಕಟ್ಟಡ ಕಾರ್ಮಿಕರ ನಿಧಿಯಿಂದ ₹ 600 ಕೋಟಿ ಇಟ್ಟಿರುವುದು, ಕೌಶಲಾಭಿವೃದ್ಧಿ ಅಕಾಡೆಮಿಗಳಿಗೆ ಇದೇ ನಿಧಿಯಿಂದ ಬಳಸಿರುವುದು ದುರುಪಯೋಗಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸರ್ಕಾರದ ಖಜಾನೆಯಿಂದ ಮಾಡಬೇಕಾದ ಯೋಜನೆಗಳಿಗೆ ಬಡ ಕಾರ್ಮಿಕರ ನಿಧಿ ಬಳಸುವುದು ಸರಿಯಲ್ಲ.</p><p><em>– ಕೆ. ಮಹಾಂತೇಶ್, ಸಿಐಟಿಯು ರಾಜ್ಯ ಕಾರ್ಯದರ್ಶಿ</em></p>.<blockquote>‘ವಿಕೇಂದ್ರೀಕೃತ ಆಡಳಿತದತ್ತ ಬದ್ಧತೆಯಿಲ್ಲ’</blockquote>.<p>ಗ್ರಾಮೀಣ ಕಲ್ಯಾಣ, ಕೃಷಿ ಮತ್ತು ಸಾಮಾಜಿಕ ರಕ್ಷಣೆ ರಾಜ್ಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಆದರೆ ವಿಕೇಂದ್ರೀಕೃತ ಆಡಳಿತದತ್ತ ಅದರ ಬದ್ಧತೆ ವಿರೋಧಾಭಾಸದಂತಿದೆ.</p><p>ಕರ್ನಾಟಕದ 5ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ35ರಷ್ಟು ವಿಕೇಂದ್ರೀಕೃತ ನಿಧಿ ಹಂಚಿಕೆ ಮಾಡಿರುವುದು ಸಕಾರಾತ್ಮಕ ಹೆಜ್ಜೆಯಾದರೂ, ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸದೇ ಆಡಳಿತಾಧಿಕಾರಿಗಳನ್ನು ನೇಮಿಸಿರುವುದು ಆ ಪ್ರಯತ್ನದ ಆತ್ಮವನ್ನೇ ದುರ್ಬಲಗೊಳಿಸುತ್ತದೆ. ಬಜೆಟ್ನಲ್ಲಿ ಅಂಗನವಾಡಿಗಳು, ಶಾಲೆಗಳು, ಮಕ್ಕಳ ಪೌಷ್ಟಿಕತೆ ಮತ್ತು ಮಹಿಳೆಯರ ಜೀವನೋಪಾಯವನ್ನು ಸ್ವಸಹಾಯ ಗುಂಪುಗಳ ಮೂಲಕ ಬಲಪಡಿಸುವ ಕಾರ್ಯಕ್ರಮಗಳು ಇವೆ. ಆದರೆ ಮಕ್ಕಳ ಮತ್ತು ಮಹಿಳೆಯರ ಸಬಲೀಕರಣವನ್ನು ಸ್ಥಳೀಯ ಆಡಳಿತದ ತೀರ್ಮಾನಗಳಲ್ಲಿ ಅವರ ನಾಯಕತ್ವ ಮತ್ತು ಭಾಗವಹಿಸುವಿಕೆಯ ಮೂಲಕ ಬಲಪಡಿಸುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ.ಕೋವಿಡ್–19ರ ನಂತರ ಗ್ರಾಮೀಣ ಭಾಗದ ಮಕ್ಕಳಲ್ಲಿ ಕಲಿಕೆಯ ಅಂತರ ಕಂಡು ಬಂದಿದೆ. ಅದನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಕ್ರಮಗಳು ಕಾಣಿಸುತ್ತಿಲ್ಲ. ಪ್ರಜಾಸತ್ತಾತ್ಮಕ ಗ್ರಾಮ ಪಂಚಾಯತ್ಗಳನ್ನು ಪುನಃಸ್ಥಾಪಿಸಿ, ಮಕ್ಕಳ ಕೇಂದ್ರಿತ ಶಿಕ್ಷಣ ಮತ್ತು ರಕ್ಷಣೆಗೆ ಆದ್ಯತೆ ನೀಡದೆ ಹೋದರೆ, ಗ್ರಾಮೀಣಾಭಿವೃದ್ಧಿ ಕ್ರಮಗಳ ಪರಿವರ್ತನಾ ಸಾಮರ್ಥ್ಯವು ಅನುಷ್ಠಾನದ ಹಂತದಲ್ಲೇ ಸೀಮಿತವಾಗುವ ಸಾಧ್ಯತೆ ಇದೆ.</p><p><em>– ಕೃಪಾ ಎಂ.ಎಂ., ಸಹನಿರ್ದೇಶಕಿ, ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಮತ್ತು ಸದಸ್ಯೆ- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ</em></p>.<blockquote>ಆಯುಷ್ ವಲಯಕ್ಕೂ ಆದ್ಯತೆ ನೀಡಬೇಕಿತ್ತು</blockquote>.<p>ಹೃದಯರೋಗ ಚಿಕಿತ್ಸೆಯ ಸಲುವಾಗಿ ಮೈಸೂರಿನ ಜಯದೇವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ನಿರ್ಧಾರ ಸ್ವಾಗತಾರ್ಹ. ಆ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಕಂಡರೂ, ರಾಜ್ಯದಲ್ಲಿರುವ ಆಯುರ್ವೇದ, ಹೋಮಿಯೋಪತಿ, ಯುನಾನಿ, ಪ್ರಕೃತಿ ಚಿಕಿತ್ಸೆ ಪದ್ಧತಿಗಳನ್ನು ಆಧರಿಸಿದ ಪ್ರಮುಖ ಕಾಲೇಜು ಹಾಗೂ ಆಸ್ಪತ್ರೆಗಳ ಮೇಲ್ದರ್ಜೆಗೂ ಒತ್ತು ನೀಡುವ ಅಗತ್ಯವಿತ್ತು. ಆಯುಷ್ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೂ ಆದ್ಯತೆ ನೀಡಿದ್ದರೆ ಸಮತೋಲನ ಕಾಯ್ದುಕೊಂಡಂತಾಗುತ್ತಿತ್ತು. ಆರೋಗ್ಯ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣದಲ್ಲಿ ಆಯುಷ್ ಇಲಾಖೆಗೂ ಸಮಾನ ಆದ್ಯತೆಯನ್ನು ನೀಡಬೇಕು.</p><p>ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊರಕುವ ಚಿಕಿತ್ಸೆಯ ಲೆಕ್ಕಪರಿಶೋಧನೆಯೂ ಅಗತ್ಯವಿದೆ. ಆರೋಗ್ಯ ಸೇವೆಯ ಅಸಮಾನತೆಯನ್ನು ನಿವಾರಿಸಲು ಇದು ಬಹಳ ಅಗತ್ಯ.</p><p>ತಾಯಂದಿರ ಅಪೌಷ್ಟಿಕತೆ ನಿವಾರಣೆ, ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವುದು ಸದ್ಯದ ತುರ್ತು ಕೂಡ ಆಗಿತ್ತು. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ಪ್ಯಾಕೇಜ್ ದರಗಳ ಜಾರಿಗೆ ಮೀಸಲಿಟ್ಟಿರುವ ಹೆಚ್ಚುವರಿ ಅನುದಾನದ ಬಳಕೆ ಸಮರ್ಪಕವಾಗಿರಬೇಕು. ಆಗಷ್ಟೇ ಬಡಜನರಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ಅದರೊಂದಿಗೆ ಸ್ಥಿರವಾದ ಆರೋಗ್ಯ ಪರಿಸರ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದಂತಾಗುತ್ತದೆ. ಬಜೆಟ್ ಆ ನಿಟ್ಟಿನಲ್ಲಿ ಒಂದು ಬೆಳಕಿಂಡಿಯಂತೆ ಕಾಣುತ್ತದೆ.</p><p><em>–ಡಾ.ಸಂದೀಪ್.ಎಸ್., ಸಂಶೋಧನೆ ಮತ್ತು ಪ್ರಕೃತಿ ಚಿಕಿತ್ಸೆ ವಿಭಾಗದ ಮುಖ್ಯಸ್ಥರು, ಸರ್ಕಾರಿ ಪ್ರಕೃತಿ ಚಿಕಿತ್ಸೆ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು</em></p>.<blockquote>ಶಿಕ್ಷಣ ಕ್ಷೇತ್ರಕ್ಕೆ ದೂರದೃಷ್ಟಿಯ ಯೋಜನೆ</blockquote>.<p>ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೆಲವು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ಪಷ್ಟವಾಗಿದೆ.</p><p>‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಧ್ಯೇಯದೊಂದಿಗೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ರೂಪಾಂತರಿಸುವ ಯೋಜನೆ ಪ್ರಮುಖವಾಗಿದೆ. ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಮಟ್ಟದವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡುವ ಈ ಮಾದರಿಯು ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.</p><p>ಸರ್ಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಆಧುನೀಕರಿಸುವುದು. ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ, ಉದ್ಯಮಶೀಲತೆ, ಸ್ಟಾರ್ಟ್ ಅಪ್ ಸಂಸ್ಕೃತಿ ಉತ್ತೇಜಿಸುವ ಪ್ರಯತ್ನ ಪ್ರಗತಿಪರವಾಗಿದೆ.</p><p>ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರವೂ ದಿಟ್ಟ ಹೆಜ್ಜೆಯಾಗಿದೆ. ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾತೃತ್ವ ರಜೆ ನೀಡಿರುವುದು ಲಿಂಗ ಸಮತೋಲನ ಉತ್ತೇಜಿಸುವ ಕ್ರಮವಾಗಿದೆ. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭಿಸುವ ನಿರ್ಧಾರ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸಬಹುದು. ಆದರೆ ಇದಕ್ಕೆ ಸೂಕ್ತ ಮಾರ್ಗಸೂಚಿ ಅಗತ್ಯವಿದೆ.</p><p>ಕಾಲೇಜುಗಳಲ್ಲಿ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ, ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಒದಗಿಸುವ ಯೋಜನೆಗಳು ಶಿಕ್ಷಣ ಕ್ಷೇತ್ರದ ಉನ್ನತಿಗೆ ಪೂರಕ ಕ್ರಮಗಳಾಗಿವೆ. ಶಿಕ್ಷಣದ ಗುಣಮಟ್ಟ, ಪಠ್ಯಕ್ರಮ ನವೀಕರಣ, ಶಿಕ್ಷಕರ ತರಬೇತಿ, ಮೌಲ್ಯಮಾಪನ, ವಿ.ವಿ ಮಟ್ಟದ ಸಂಶೋಧನೆಗೆ ಪ್ರಾಶಸ್ತ್ಯದ ಅಗತ್ಯವಿತ್ತು.</p><p>– ಜ್ಯೋತಿ, <em>ಸಹ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026–27ನೇ ಸಾಲಿನ ರಾಜ್ಯ ಬಜೆಟ್ ಕುರಿತು ವಿವಿಧ ಕ್ಷೇತ್ರಗಳ ತಜ್ಞರು ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<blockquote>ರೈತರಿಗೆ ಸಮಾಧಾನ ತರದ ಬಜೆಟ್</blockquote>.<p>ಬಜೆಟ್ನಲ್ಲಿ ರೈತರಿಗೆ ಸಮಾಧಾನ ಆಗುವಂಥ ಯಾವುದೇ ಯೋಜನೆ ಕೊಟ್ಟಿಲ್ಲ. ಕೃಷಿಗೆ ₹ 8,348 ಕೋಟಿ ಘೋಷಿಸಿದ್ದಾರೆ. ಇದರಲ್ಲಿ ಕೃಷಿ ಮತ್ತು ತೋಟಗಾರಿಕೆ ಎರಡನ್ನೂ ಸೇರಿಸಿದ್ದು ಸರಿಯಲ್ಲ.</p><p>ಗೃಹಲಕ್ಷ್ಮಿ ಮಾದರಿಯಲ್ಲಿ ವಯಸ್ಸಾದ ರೈತರಿಗೆ ತಲಾ ₹5 ಸಾವಿರ ತಿಂಗಳ ನೆರವು ಕೇಳಲಾಗಿತ್ತು. ಪ್ರಕೃತಿ ವಿಕೋಪದಿಂದ ಆಗುವ ಹಾನಿ ಭರಿಸಲು ₹10 ಸಾವಿರ ಕೋಟಿ ಆವರ್ತನಿಧಿ, ಕಬ್ಬಿಗೆ ಪ್ರೋತ್ಸಾಹ ಧನ ನೀಡಲು ₹1 ಸಾವಿರ ಕೋಟಿ ಇಡಗಂಟು ಇಡಲು ಕೋರಲಾಗಿತ್ತು. ಯಾವುದನ್ನೂ ಪರಿಗಣಿಸಿಲ್ಲ. </p><p>ಕಳಪೆ ಬೀಜ ಮತ್ತು ಗೊಬ್ಬರದ ಹಾವಳಿ ತಪ್ಪಿಸಲು ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಹಾನಿಯಾದ ಬಳಿಕ ವರದಿ ಕೊಡುತ್ತದೆ ಹೊರತು; ಹಾನಿ ತಡೆಯುವುದಿಲ್ಲ. ಬೆಳೆವಿಮೆ ಪರಿಹಾರಕ್ಕೆ ₹6,638 ಕೋಟಿ ನೀಡಿದ್ದಾರೆ. ಖಾಸಗಿ ಕಂಪನಿಗಳಿಗೆ ಹಣ; ರೈತರ ಬಾಯಿಗೆ ಮಣ್ಣು ಎನ್ನುವಂತಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಈ ವಿಮೆ ವಿತರಿಸಬೇಕು ಎಂಬ ರೈತರ ದಶಕದ ಬೇಡಿಕೆ ಈಡೇರಿಸಿಲ್ಲ. ಜನರ ರಂಜನೆಗೆ ‘ಗ್ಯಾರಂಟಿ’ ಯೋಜನೆ ನೀಡುತ್ತಾರೆ. ಆದರೆ, ಬದುಕಲು ಬೇಕಾದ ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ಕುಕ್ಕುಟೋದ್ಯಮ ಇಂಥವುಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಜೆಟ್ನಲ್ಲಿ ಕೃಷಿ ಕ್ಷೇತ್ರ ಬಹಳ ಕ್ಷೀಣಿಸಿದೆ. ಬಾಯಾರಿದವರಿಗೆ ನೀರು ಕೊಡಬೇಕು, ತೀರ್ಥ ಕೊಟ್ಟರೆ ಏನು ಪ್ರಯೋಜನ?</p><p><em>– ಸಿದಗೌಡ ಮೋದಗಿ, ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ– ಕರ್ನಾಟಕ</em></p>.<blockquote>ನಗರಾಭಿವೃದ್ಧಿ ಬೆಂಗಳೂರಿಗಷ್ಟೇ ಆದ್ಯತೆ</blockquote>.<p>ಹನ್ನೊಂದು ಆರ್ಥಿಕ ಆದ್ಯತೆಗಳ ಮೇಲೆ ನಡೆದಿರುವ ರಾಜ್ಯ ಸರ್ಕಾರವು ನಗರಾಭಿವೃದ್ಧಿಗೆ ಸಂಬಂಧಿಸಿ, ನಗರ ಕೇಂದ್ರಿತ ಸುಸ್ಥಿರ ಅಭಿವೃದ್ಧಿಯನ್ನೇ ಆದ್ಯತೆಯಾಗಿರಿಸಿ ಕೊಂಡಿರುವುದು ಕಾಣುತ್ತದೆ. ಬೆಂಗಳೂರು ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನೂ ಬಜೆಟ್ ನೀಡಿದೆ. ಇತರೆ ನಗರಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬಹುದಾಗಿತ್ತು.</p><p>ವಸತಿ ವಲಯದಲ್ಲಿ ಹಿಂದಿನ ಸರ್ಕಾರವು ಅನುದಾನ ನೀಡದೆ ಮಂಜೂರಾತಿ ನೀಡಿದ್ದ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿರುವುದು ಈಗಿನ ಸರ್ಕಾರದ ಉತ್ತಮ ಹೆಜ್ಜೆ.</p><p>ಕೆಎಚ್ಬಿ ವತಿಯಿಂದ ವರ್ಷದಲ್ಲಿ 50 ಸಾವಿರ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವ ಕ್ರಮ ಬಡವರಿಗೆ ನೆರವಾಗಲಿದೆ. ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಪ್ರಕಟಿಸಿರುವುದು ಸ್ವಾಗತಾರ್ಹ.</p><p>ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 1 ಲಕ್ಷ ಫಲಾನುಭವಿಗಳಿಗೆ ನೆರವು ನೀಡುವ ಹೊಸ ಗುರಿಯನ್ನೂ ಸೇರಿಸಿರುವುದು ವಿಶೇಷ. ಇದರಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುವ ಸಹಾಯಧನ ವನ್ನು ₹1.20 ಲಕ್ಷದಿಂದ ₹2 ಲಕ್ಷಕ್ಕೆ, ಪರಿಶಿಷ್ಟರಿಗೆ ನೀಡುವ ಸಹಾಯಧನವನ್ನು ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಿರುವುದು, ಸ್ವಂತ ಮನೆ ಹೊಂದಬೇಕೆಂಬುವವರಲ್ಲಿ ಹೊಸ ಭರವಸೆ ಮೂಡಿಸುತ್ತದೆ. ವಸತಿ ಯೋಜನೆಯ ಸಾಮರ್ಥ್ಯವೂ ಹೆಚ್ಚಾಗಿದೆ.</p><p><em>– ಪ್ರೊ.ನವಿತಾ ತಿಮ್ಮಯ್ಯ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು, ಮೈಸೂರು ವಿಶ್ವವಿದ್ಯಾಲಯ</em></p>.<blockquote>ಹೊಸ ಯೋಜನೆಗಿಲ್ಲ ಆಸಕ್ತಿ: ಹಾಲಿ ಯೋಜನೆಗೆ ‘ಶಕ್ತಿ’</blockquote>.<p>ಬಜೆಟ್ನಲ್ಲಿ ಮಹಿಳೆಯರಿಗಾಗಿ ಹೊಸ ಯೋಜನೆಗಳು ಹೆಚ್ಚು ಕಾಣಿಸದಿದ್ದರೂ, ಸಾಮಾನ್ಯ ಮಹಿಳೆಯರಿಗೆ ಆರ್ಥಿಕ ಚೈತನ್ಯ ನೀಡಿದ ಗೃಹಲಕ್ಷ್ಮಿ, ಶಕ್ತಿ ಮುಂತಾದವುಗಳನ್ನು ಮುಂದುವರಿಸಿರುವುದು ಒಳ್ಳೆಯ ಕ್ರಮ.</p><p>ಮಹಿಳೆಯರ ಆರೋಗ್ಯ, ಪೌಷ್ಟಿಕತೆ, ರಕ್ಷಣೆ, ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೃಷಿಕ ಮಹಿಳೆಯರಿಗೆ ತರಬೇತಿ, ಪರಿಶಿಷ್ಟ ಜಾತಿ, ಪಂಗಡದ ಉದ್ಯೋಗಸ್ಥರಿಗೆ ವಸತಿ ನಿಲಯ, ಸರಿಯಾಗಿ ಸಾಲ ಮರುಪಾವತಿಸುವ ಸ್ವ ಸಹಾಯ ಸಂಘಗಳಿಗೆ ಬೆಂಬಲ, ಮಾಜಿ ದೇವದಾಸಿಯರು ಮತ್ತು ಅವರ ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ಮಹಿಳೆಯರಿಗೆ ವೃದ್ಧಾಶ್ರಮ, ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕಿಯರಿಗೆ ಮಾತೃತ್ವ ರಜೆ ಕ್ರಮಗಳು ಪ್ರಯೋಜನಕಾರಿ. ಆದರೆ, ಇದರಲ್ಲಿ ಹೆಚ್ಚಿನ ಸೌಲಭ್ಯಗಳು ಮಹಿಳೆಯರು ಸಹಜವಾಗಿ ಪಡೆಯಬೇಕಾದ್ದ ಹಕ್ಕುಗಳಾಗಿದ್ದು, ಇನ್ನಷ್ಟು ಹೆಚ್ಚಿನ ವ್ಯಾಪ್ತಿ ಹೊಂದಬೇಕು. ಗ್ರಾಮೀಣ ಮಹಿಳೆಯರಿಗೆ ಕೌಶಲ ಒದಗಿಸಿ, ಸ್ಥಳೀಯವಾಗಿ ಉದ್ಯೋಗ ಒದಗಿಸುವ ಯೋಜನೆಗಳು ಅಗತ್ಯ.</p><p>ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದರಿಂದ, ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಯೋಜನೆಗಳನ್ನು ರೂಪಿಸಬೇಕಾಗಿದೆ.</p><p>ಅಂಗನವಾಡಿ ಬಲಪಡಿಸುವಿಕೆ, ಸರ್ಕಾರಿ ಶಾಲೆಗಳ ಉನ್ನತೀಕರಣ, ಮಾದಕ ವಸ್ತು ನಿಯಂತ್ರಣಕ್ಕೆ ಒತ್ತು, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಶ್ಲಾಘನೀಯ. ಜೀವನ ಕೌಶಲ, ಪರಿಸರ ಪ್ರೀತಿ, ಮಾನವೀಯ ಮೌಲ್ಯಗಳು ಮೊದಲಾದ ಮಕ್ಕಳ ಬೆಳವಣಿಗೆಯ ಭಾಗವಾಗುವಂತಹ ಯೋಜನೆಗಳು ರೂಪುಗೊಳ್ಳಲಿ.</p><p><em>–ಮಮತಾ ರೈ, ಕದಿಕೆ ಟ್ರಸ್ಟ್, ಉಡುಪಿ</em></p>.<blockquote>ಮಾನವ ಅಭಿವೃದ್ಧಿಗೂ ಪ್ರಾಶಸ್ತ್ಯ</blockquote>.<p>ನಗರ ಪ್ರದೇಶ ಅಲ್ಲದೇ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಸೇತುವೆ, ಸೇತುವೆ ದುರಸ್ತಿ, ಕಾಲುಸಂಕಗಳ ನಿರ್ಮಾಣ ಕಾಮಗಾರಿಗೆ ₹200 ಕೋಟಿ ಅನುದಾನ ಘೋಷಣೆಯು ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುತ್ತದೆ. ಇದರಿಂದ ಮಲೆನಾಡು, ಕರಾವಳಿ ಪ್ರದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.</p><p>ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ ನಿರ್ಮಾಣಕ್ಕೆ ₹5,776 ಕೋಟಿ ವೆಚ್ಚ ಮಾಡುವು ದಾಗಿ ತಿಳಿಸಲಾಗಿದೆ. ಇದು ಜಿಲ್ಲೆ ಮತ್ತು ತಾಲ್ಲೂಕುಗಳ ನಡುವೆ ಸಂಪರ್ಕ ಕಲ್ಪಿಸಲು ಸುಲಭವಾಗಿ, ಆರ್ಥಿಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಬಹುದು. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುವ ಬದಲು, 2 ಮತ್ತು 3ನೇ ಹಂತದ ನಗರಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿತ್ತು. ಬೆಂಗಳೂರಿನಲ್ಲೇ ಎರಡನೇ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಮುಂದಾಗಿದ್ದು ಅನಗತ್ಯ. ಬೆಂಗಳೂರು ಜನದಟ್ಟಣೆಯಿಂದ ನರಳುತ್ತಿದೆ. ಸಾಕಷ್ಟು ಮೂಲಸೌಕರ್ಯಗಳ ಯೋಜನೆಗಳು ಅಲ್ಲಿವೆ. ಅದೇ ವಿಮಾನ ನಿಲ್ದಾಣ ಬೇರೆ ಭಾಗದಲ್ಲಿ ನಿರ್ಮಾಣವಾದರೆ ಪ್ರಾದೇಶಿಕ ಅಸಮತೋಲನ ದೂರವಾಗುತ್ತಿತ್ತು.</p><p>ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರ– ಸಾರ್ವಜನಿಕ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ. ಆದರೆ, ವನ್ಯ, ಸಸ್ಯ, ಜಲಸಂಪತ್ತಿಗೆ ಧಕ್ಕೆಯಾಗಬಾರದು. ಇದೇ ಜಿಲ್ಲೆಯಲ್ಲಿ ಬಹುತೇಕ ಕಡೆ ಸುಸಜ್ಜಿತ ರಸ್ತೆ ಮತ್ತು ಮೂಲಸೌಕರ್ಯಗಳೂ ಇಲ್ಲ.</p><p><em>– ವಿಕಾಸ ಸೊಪ್ಪಿನ, ಮಾರುಕಟ್ಟೆ ಸಲಹೆಗಾರ, ಹುಬ್ಬಳ್ಳಿ</em></p>.<blockquote>ಹೂಡಿಕೆ ಪ್ರೋತ್ಸಾಹಕ್ಕೆ ಪೂರಕ</blockquote>.<p>ಬಜೆಟ್ನಲ್ಲಿ ಘೋಷಿಸಲಾದ ಹಲವು ಕ್ರಮಗಳು ಕೈಗಾರಿಕೋದ್ಯಮಿಗಳ ವಿಶ್ವಾಸ ಹೆಚ್ಚಿಸಿವೆ. ಎಂಎಸ್ಎಂಇ ವಲಯಕ್ಕೆ ಬೆಂಬಲ ನೀಡಿರುವುದು ಉದಯೋನ್ಮುಖ ತಂತ್ರಜ್ಞಾನಕ್ಕೆ ಉತ್ತೇಜನಕಾರಿ ಆಗಿದೆ ಮತ್ತು ರಾಜ್ಯದಾದ್ಯಂತ ಹೂಡಿಕೆಯನ್ನು ಪ್ರೋತ್ಸಾಹಿಸಲು ಪೂರಕವಾಗಿದೆ.</p><p>ಬೆಂಗಳೂರಿನ ಆಚೆಗೆ, 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸರ್ಕಾರದ ಕ್ರಮ ಶ್ಲಾಘನೀಯ. ಮಂಡ್ಯದಲ್ಲಿ ಸುಮಾರು ₹500 ಕೋಟಿ ಹೂಡಿಕೆಯೊಂದಿಗೆ ‘ಆಟೊಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ ಸ್ಥಾಪಿಸುವ ಪ್ರಸ್ತಾವನೆಯು ಕರ್ನಾಟಕದ ವಾಹನ ಉದ್ಯಮವನ್ನು ಬಲಪಡಿಸಲಿದೆ.</p><p>ವಾಹನ ಗುಜರಿ ಕೇಂದ್ರದ ಸ್ಥಾಪನೆಯಿಂದ ಮಾಲಿನ್ಯ ನಿಯಂತ್ರಣ, ಮರುಬಳಕೆ ಹಾಗೂ ಆಟೊಮೊಬೈಲ್ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ. ಬೆಳಗಾವಿಯಲ್ಲಿ ಸಾವಿರ ಎಕರೆಯಲ್ಲಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವ ಪ್ರಸ್ತಾವನೆಯು ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಉತ್ತೇಜನ ನೀಡುತ್ತದೆ ಮತ್ತು ಉದ್ಯೋಗ ಅವಕಾಶ ಹೆಚ್ಚಿಸುತ್ತದೆ.</p><p>ವೈಮಾಂತರಿಕ್ಷ ಮತ್ತು ರಕ್ಷಣಾ ವಲಯ ಕೇಂದ್ರೀಕರಿಸಿ ಮೈಸೂರಿನಲ್ಲಿ ಪ್ರತ್ಯೇಕ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಕರ್ನಾಟಕವನ್ನು ಈ ವಲಯದ ಪ್ರಮುಖ ಕೇಂದ್ರವನ್ನಾಗಿಸಲು ಸಾಧ್ಯವಾಗಲಿದೆ. ಮೈಸೂರನ್ನು ಎರಡನೇ ಐ.ಟಿ ನಗರವಾಗಿ ಅಭಿವೃದ್ಧಿಪಡಿಸುವುದು, ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂದುವರಿಯಲು ನೀಲನಕ್ಷೆಯು ನಾವೀನ್ಯ ಆಧಾರಿತ ಕೈಗಾರಿಕಾ ವಲಯದಲ್ಲಿ ರಾಜ್ಯವನ್ನು ಮುಂಚೂಣಿಗೆ ತೆಗೆದುಕೊಂಡು ಹೋಗಲು ನೆರವಾಗಲಿದೆ. ಪ್ರತ್ಯೇಕ ಎಂಎಸ್ಇ ನೀತಿ ಘೋಷಿಸಬೇಕು. ಉದ್ಯಮಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಬೇಕು.</p><p><em>– ಉಮಾ ರೆಡ್ಡಿ, ಎಫ್ಕೆಸಿಸಿಐ ಅಧ್ಯಕ್ಷೆ</em></p>.<blockquote>ಪ್ರಾದೇಶಿಕ ಯೋಜನೆಗೆ ಬೇಕಿತ್ತು ಗಮನ</blockquote>.<p>ಹಿಂದುಳಿದ ಹಣೆಪಟ್ಟಿ ಹೊತ್ತ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ಹೆಚ್ಚುವರಿಯಾಗಿ ₹5,000 ಕೋಟಿ ಒದಗಿಸಲಾಗಿದೆ. ಜೊತೆಗೆ ರಾಜ್ಯದ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚಗಳಲ್ಲಿ ಕಲ್ಯಾಣದ ವ್ಯಾಪ್ತಿಯ ಪ್ರದೇಶಕ್ಕೂ ಪಾಲು ದೊರೆಯಲಿದೆ.</p><p>ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ ಟ್ರಾಮಾ ಕೇರ್ ಕೇಂದ್ರ, ಗಣಿಬಾಧಿತ ಗ್ರಾಮಗಳಿಗೆ ಆರೋಗ್ಯ ಸೇವೆಗಳ ವಿಸ್ತರಣೆ, ಮುನಿರಾಬಾದ್–ಟಿ.ಬಿ.ಡ್ಯಾಂನಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣ, ಕಲಬುರಗಿಯಲ್ಲಿ ಕ್ರೈಸ್ ವಸತಿ ಶಾಲೆ, ಈ ಪ್ರದೇಶದಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಕೊಪ್ಪಳದಲ್ಲಿ ತಂತ್ರಜ್ಞಾನ ಕೇಂದ್ರ ಘೋಷಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಚನೆಯಾಗಿದ್ದ ಪ್ರೊ.ಎಂ.ಗೋವಿಂದರಾವ್ ಸಮಿತಿ ಶಿಫಾರಸಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ₹4,191 ಕೋಟಿ ನೀಡಲಾಗಿದ್ದು, ಇದು ಈ ಪ್ರದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಲು ಸಹಕಾರಿಯಾಗುವ ನಿರೀಕ್ಷೆಯಿದೆ.</p><p>ಸಂಪೂರ್ಣ ರಾಜ್ಯಕ್ಕೆ ಏಕೀಕೃತ ಕಾರ್ಯಕ್ರಮಗಳಿಗಿಂತಲೂ ಪ್ರದೇಶವಾರು ಸಮಸ್ಯೆಗಳನ್ನು ಗುರುತಿಸಿ ನಿವಾರಣೆಗೆ ಕ್ರಮ ಕೈಗೊಳ್ಳುವುದು ಉತ್ತಮ. ಈ ರೀತಿಯ ಕ್ರಮಕ್ಕೆ ಇನ್ನಷ್ಟು ಒತ್ತು ಕೊಡಬೇಕಿತ್ತು. ಅಸಮಾನತೆಯಿಂದ ಕೂಡಿರುವ ಪ್ರದೇಶಗಳ ನಡುವೆ ಅನುದಾನದ ಸಮಾನ ಹಂಚಿಕೆ ಕೂಡ ಅಸಮಾನತೆಯನ್ನು ಉಲ್ಬಣಗೊಳಿಸುವ ಸಾಧ್ಯತೆಯಿರುತ್ತದೆ. ಬಜೆಟ್ನಲ್ಲಿ ಪ್ರಾದೇಶಿಕವಾರು ಜನಕೇಂದ್ರಿತ ಕಾರ್ಯಕ್ರಮ ಆದ್ಯತೆ ಪಡೆದುಕೊಳ್ಳಬೇಕಿತ್ತು. </p><p><em>– ಜೆ. ಕೃಷ್ಣ, ಗಂಗಾವತಿಯ ಎಸ್ಕೆಎನ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕ</em></p>.<blockquote>ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಒತ್ತು </blockquote>.<p>2026–27ನೇ ಸಾಲಿನ ರಾಜ್ಯ ಬಜೆಟ್ ಪ್ರಾದೇಶಿಕ ಸಮತೋಲನ ಮತ್ತು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಘೋಷಿಸಲಾಗಿದೆ.</p><p>ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಶೀತಲಗೃಹ ನಿರ್ಮಾಣ, ಹಾವೇರಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಮತ್ತು ಬೆಳಗಾವಿಯಲ್ಲಿ ಕುರಿ-ಮೇಕೆ ಸಾಕಣೆ ಮತ್ತು ಹೈನುಗಾರಿಕೆಗೆ ಸಹಾಯಧನ ನೀಡುವ ಯೋಜನೆಗಳು ಉಪಯುಕ್ತ ಆಗಿವೆ.</p><p>ಆಲಮಟ್ಟಿ ಅಣೆಕಟ್ಟು ಎತ್ತರಿಸುವುದು ಮತ್ತು ತುಬಚಿ–ಬಬಲೇಶ್ವರ ಏತ ನೀರಾವರಿ ಯೋಜನೆಗಳು ಈ ಭಾಗದ ಕೃಷಿ ಸಾಮರ್ಥ್ಯವನ್ನು ವಿಸ್ತರಿಸಲಿವೆ. ಬೆಳಗಾವಿಯಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆ ಮತ್ತು ಧಾರವಾಡ ಕೈಗಾರಿಕಾ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆ ಮೂಡಿಸಿವೆ.</p><p>ಧಾರವಾಡದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರಗಳ ಸ್ಥಾಪನೆ ಹಾಗೂ ಐಐಟಿ ಧಾರವಾಡ ಸಹಯೋಗದ ಎಐ ಆಧಾರಿತ ಕಲಿಕಾ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣಾವಕಾಶ ಒದಗಿಸಲಿವೆ. ಆರೋಗ್ಯ ಕ್ಷೇತ್ರದಲ್ಲಿ ಕಾರವಾರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಜಯದೇವ ಹೃದ್ರೋಗ ಕೇಂದ್ರ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲಿವೆ. ಪ್ರಮುಖ ಪ್ರವಾಸಿ ತಾಣವಾದ ಗದಗ-ಕಪ್ಪತ್ತಗುಡ್ಡ–ಲಕ್ಕುಂಡಿ ಪ್ರವಾಸೋದ್ಯಮ ಸರ್ಕಿಟ್ ಅಭಿವೃದ್ಧಿಪಡಿಸುವುದು ಉತ್ತಮ ಯೋಜನೆಯಾಗಿದೆ.</p><p>ಈ ಎಲ್ಲಾ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾದಲ್ಲಿ, ಕಿತ್ತೂರು ಕರ್ನಾಟಕದ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ.</p><p><em>– ಪ್ರೊ. ಸುರೇಶ ವಿ. ನಾಡಗೌಡರ, ಗದಗದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿವಿಯ ಪ್ರಭಾರ ಕುಲಪತಿ</em></p>.<blockquote>ಕಾರ್ಮಿಕ ರಂಗಕ್ಕೆ ಅರೆಕಾಸೂ ಇಲ್ಲ</blockquote>.<p>ಕರ್ನಾಟಕದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್ನಲ್ಲಿ ಅರೆಕಾಸಿನ ನೆರವೂ ಸಿಕ್ಕಿಲ್ಲ. ಮಾಲೀಕ ವರ್ಗವನ್ನು ಓಲೈಸಿದಂತಿದೆ.</p><p>ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಸಂಹಿತೆಗಳು ಜಾರಿಯಾದರೆ ಅಸ್ತಿತ್ವದಲ್ಲಿರುವ ಹಕ್ಕು, ಸೌಲಭ್ಯಗಳು ಅಪಾಯಕ್ಕೆ ಸಿಲುಕಲಿವೆ. ಕೆಲಸದ ಸ್ಥಳಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಅಗತ್ಯವಿರುವ ಸುರಕ್ಷತಾ ಕ್ರಮ ಹಾಗೂ ಜೀವಗಳ ರಕ್ಷಣೆ ಮಾಡುವ ಬಗ್ಗೆ ಈ ಬಜೆಟ್ ಯಾವ ಭರವಸೆಯನ್ನೂ ನೀಡಿಲ್ಲ. ಕನಿಷ್ಠ ವೇತನ ₹ 33 ಸಾವಿರ ನಿಗದಿಪಡಿಸಬೇಕು ಎಂದು ಹೋರಾಟ ನಡೆಸಿದರೂ ಮುಖ್ಯಮಂತ್ರಿ ಸ್ಪಂದಿಸಿಲ್ಲ.</p><p>ಅಸಂಘಟಿತ 93 ವಲಯಗಳಲ್ಲಿ 2 ಕೋಟಿಗಿಂತ ಅಧಿಕ ಕಾರ್ಮಿಕರಿದ್ದಾರೆ. ಅವರಿಗೆ ಕನಿಷ್ಠ ಪಿಂಚಣಿ, ವೈದ್ಯಕೀಯ, ವಸತಿ ಸಹಿತ ಯಾವುದೇ ಸೌಲಭ್ಯಗಳನ್ನು ನೀಡದೇ ಕೌಶಲಾಭಿವೃದ್ಧಿಗಾಗಿ ‘ಕಾಯಕ’ ಆನ್ಲೈನ್ ಕೇಂದ್ರ ಸ್ಥಾಪಿಸಲು ₹ 5 ಕೋಟಿ ಒದಗಿಸಿರುವುದು ಹಾಸ್ಯಾಸ್ಪದ. ಜಿಟಿಟಿಸಿ ಸ್ಥಾಪಿಸಲು ಕಟ್ಟಡ ಕಾರ್ಮಿಕರ ನಿಧಿಯಿಂದ ₹ 600 ಕೋಟಿ ಇಟ್ಟಿರುವುದು, ಕೌಶಲಾಭಿವೃದ್ಧಿ ಅಕಾಡೆಮಿಗಳಿಗೆ ಇದೇ ನಿಧಿಯಿಂದ ಬಳಸಿರುವುದು ದುರುಪಯೋಗಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಸರ್ಕಾರದ ಖಜಾನೆಯಿಂದ ಮಾಡಬೇಕಾದ ಯೋಜನೆಗಳಿಗೆ ಬಡ ಕಾರ್ಮಿಕರ ನಿಧಿ ಬಳಸುವುದು ಸರಿಯಲ್ಲ.</p><p><em>– ಕೆ. ಮಹಾಂತೇಶ್, ಸಿಐಟಿಯು ರಾಜ್ಯ ಕಾರ್ಯದರ್ಶಿ</em></p>.<blockquote>‘ವಿಕೇಂದ್ರೀಕೃತ ಆಡಳಿತದತ್ತ ಬದ್ಧತೆಯಿಲ್ಲ’</blockquote>.<p>ಗ್ರಾಮೀಣ ಕಲ್ಯಾಣ, ಕೃಷಿ ಮತ್ತು ಸಾಮಾಜಿಕ ರಕ್ಷಣೆ ರಾಜ್ಯ ಬಜೆಟ್ನಲ್ಲಿ ಒತ್ತು ನೀಡಲಾಗಿದೆ. ಆದರೆ ವಿಕೇಂದ್ರೀಕೃತ ಆಡಳಿತದತ್ತ ಅದರ ಬದ್ಧತೆ ವಿರೋಧಾಭಾಸದಂತಿದೆ.</p><p>ಕರ್ನಾಟಕದ 5ನೇ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ35ರಷ್ಟು ವಿಕೇಂದ್ರೀಕೃತ ನಿಧಿ ಹಂಚಿಕೆ ಮಾಡಿರುವುದು ಸಕಾರಾತ್ಮಕ ಹೆಜ್ಜೆಯಾದರೂ, ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸದೇ ಆಡಳಿತಾಧಿಕಾರಿಗಳನ್ನು ನೇಮಿಸಿರುವುದು ಆ ಪ್ರಯತ್ನದ ಆತ್ಮವನ್ನೇ ದುರ್ಬಲಗೊಳಿಸುತ್ತದೆ. ಬಜೆಟ್ನಲ್ಲಿ ಅಂಗನವಾಡಿಗಳು, ಶಾಲೆಗಳು, ಮಕ್ಕಳ ಪೌಷ್ಟಿಕತೆ ಮತ್ತು ಮಹಿಳೆಯರ ಜೀವನೋಪಾಯವನ್ನು ಸ್ವಸಹಾಯ ಗುಂಪುಗಳ ಮೂಲಕ ಬಲಪಡಿಸುವ ಕಾರ್ಯಕ್ರಮಗಳು ಇವೆ. ಆದರೆ ಮಕ್ಕಳ ಮತ್ತು ಮಹಿಳೆಯರ ಸಬಲೀಕರಣವನ್ನು ಸ್ಥಳೀಯ ಆಡಳಿತದ ತೀರ್ಮಾನಗಳಲ್ಲಿ ಅವರ ನಾಯಕತ್ವ ಮತ್ತು ಭಾಗವಹಿಸುವಿಕೆಯ ಮೂಲಕ ಬಲಪಡಿಸುವ ಬಗ್ಗೆ ಸ್ಪಷ್ಟ ಉಲ್ಲೇಖಗಳಿಲ್ಲ.ಕೋವಿಡ್–19ರ ನಂತರ ಗ್ರಾಮೀಣ ಭಾಗದ ಮಕ್ಕಳಲ್ಲಿ ಕಲಿಕೆಯ ಅಂತರ ಕಂಡು ಬಂದಿದೆ. ಅದನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ಕ್ರಮಗಳು ಕಾಣಿಸುತ್ತಿಲ್ಲ. ಪ್ರಜಾಸತ್ತಾತ್ಮಕ ಗ್ರಾಮ ಪಂಚಾಯತ್ಗಳನ್ನು ಪುನಃಸ್ಥಾಪಿಸಿ, ಮಕ್ಕಳ ಕೇಂದ್ರಿತ ಶಿಕ್ಷಣ ಮತ್ತು ರಕ್ಷಣೆಗೆ ಆದ್ಯತೆ ನೀಡದೆ ಹೋದರೆ, ಗ್ರಾಮೀಣಾಭಿವೃದ್ಧಿ ಕ್ರಮಗಳ ಪರಿವರ್ತನಾ ಸಾಮರ್ಥ್ಯವು ಅನುಷ್ಠಾನದ ಹಂತದಲ್ಲೇ ಸೀಮಿತವಾಗುವ ಸಾಧ್ಯತೆ ಇದೆ.</p><p><em>– ಕೃಪಾ ಎಂ.ಎಂ., ಸಹನಿರ್ದೇಶಕಿ, ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಮತ್ತು ಸದಸ್ಯೆ- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ</em></p>.<blockquote>ಆಯುಷ್ ವಲಯಕ್ಕೂ ಆದ್ಯತೆ ನೀಡಬೇಕಿತ್ತು</blockquote>.<p>ಹೃದಯರೋಗ ಚಿಕಿತ್ಸೆಯ ಸಲುವಾಗಿ ಮೈಸೂರಿನ ಜಯದೇವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ನಿರ್ಧಾರ ಸ್ವಾಗತಾರ್ಹ. ಆ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನ ಕಂಡರೂ, ರಾಜ್ಯದಲ್ಲಿರುವ ಆಯುರ್ವೇದ, ಹೋಮಿಯೋಪತಿ, ಯುನಾನಿ, ಪ್ರಕೃತಿ ಚಿಕಿತ್ಸೆ ಪದ್ಧತಿಗಳನ್ನು ಆಧರಿಸಿದ ಪ್ರಮುಖ ಕಾಲೇಜು ಹಾಗೂ ಆಸ್ಪತ್ರೆಗಳ ಮೇಲ್ದರ್ಜೆಗೂ ಒತ್ತು ನೀಡುವ ಅಗತ್ಯವಿತ್ತು. ಆಯುಷ್ ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೂ ಆದ್ಯತೆ ನೀಡಿದ್ದರೆ ಸಮತೋಲನ ಕಾಯ್ದುಕೊಂಡಂತಾಗುತ್ತಿತ್ತು. ಆರೋಗ್ಯ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣದಲ್ಲಿ ಆಯುಷ್ ಇಲಾಖೆಗೂ ಸಮಾನ ಆದ್ಯತೆಯನ್ನು ನೀಡಬೇಕು.</p><p>ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೊರಕುವ ಚಿಕಿತ್ಸೆಯ ಲೆಕ್ಕಪರಿಶೋಧನೆಯೂ ಅಗತ್ಯವಿದೆ. ಆರೋಗ್ಯ ಸೇವೆಯ ಅಸಮಾನತೆಯನ್ನು ನಿವಾರಿಸಲು ಇದು ಬಹಳ ಅಗತ್ಯ.</p><p>ತಾಯಂದಿರ ಅಪೌಷ್ಟಿಕತೆ ನಿವಾರಣೆ, ಮಕ್ಕಳ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವುದು ಸದ್ಯದ ತುರ್ತು ಕೂಡ ಆಗಿತ್ತು. ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಚಿಕಿತ್ಸಾ ಪ್ಯಾಕೇಜ್ ದರಗಳ ಜಾರಿಗೆ ಮೀಸಲಿಟ್ಟಿರುವ ಹೆಚ್ಚುವರಿ ಅನುದಾನದ ಬಳಕೆ ಸಮರ್ಪಕವಾಗಿರಬೇಕು. ಆಗಷ್ಟೇ ಬಡಜನರಿಗೆ ಹೆಚ್ಚಿನ ಅನುಕೂಲ ಸಿಗುತ್ತದೆ. ಅದರೊಂದಿಗೆ ಸ್ಥಿರವಾದ ಆರೋಗ್ಯ ಪರಿಸರ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದಂತಾಗುತ್ತದೆ. ಬಜೆಟ್ ಆ ನಿಟ್ಟಿನಲ್ಲಿ ಒಂದು ಬೆಳಕಿಂಡಿಯಂತೆ ಕಾಣುತ್ತದೆ.</p><p><em>–ಡಾ.ಸಂದೀಪ್.ಎಸ್., ಸಂಶೋಧನೆ ಮತ್ತು ಪ್ರಕೃತಿ ಚಿಕಿತ್ಸೆ ವಿಭಾಗದ ಮುಖ್ಯಸ್ಥರು, ಸರ್ಕಾರಿ ಪ್ರಕೃತಿ ಚಿಕಿತ್ಸೆ ಕಾಲೇಜು ಮತ್ತು ಆಸ್ಪತ್ರೆ, ಮೈಸೂರು</em></p>.<blockquote>ಶಿಕ್ಷಣ ಕ್ಷೇತ್ರಕ್ಕೆ ದೂರದೃಷ್ಟಿಯ ಯೋಜನೆ</blockquote>.<p>ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೆಲವು ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವುದು ಸ್ಪಷ್ಟವಾಗಿದೆ.</p><p>‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಧ್ಯೇಯದೊಂದಿಗೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಾಗಿ ರೂಪಾಂತರಿಸುವ ಯೋಜನೆ ಪ್ರಮುಖವಾಗಿದೆ. ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಮಟ್ಟದವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡುವ ಈ ಮಾದರಿಯು ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿದೆ.</p><p>ಸರ್ಕಾರಿ ಪದವಿ ಕಾಲೇಜು, ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಆಧುನೀಕರಿಸುವುದು. ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿ, ಉದ್ಯಮಶೀಲತೆ, ಸ್ಟಾರ್ಟ್ ಅಪ್ ಸಂಸ್ಕೃತಿ ಉತ್ತೇಜಿಸುವ ಪ್ರಯತ್ನ ಪ್ರಗತಿಪರವಾಗಿದೆ.</p><p>ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ನಿರ್ಧಾರವೂ ದಿಟ್ಟ ಹೆಜ್ಜೆಯಾಗಿದೆ. ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾತೃತ್ವ ರಜೆ ನೀಡಿರುವುದು ಲಿಂಗ ಸಮತೋಲನ ಉತ್ತೇಜಿಸುವ ಕ್ರಮವಾಗಿದೆ. ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭಿಸುವ ನಿರ್ಧಾರ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸಬಹುದು. ಆದರೆ ಇದಕ್ಕೆ ಸೂಕ್ತ ಮಾರ್ಗಸೂಚಿ ಅಗತ್ಯವಿದೆ.</p><p>ಕಾಲೇಜುಗಳಲ್ಲಿ ದೌರ್ಜನ್ಯ ತಡೆಗೆ ರೋಹಿತ್ ವೇಮುಲ ಕಾಯ್ದೆ ಜಾರಿ, ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯ ಒದಗಿಸುವ ಯೋಜನೆಗಳು ಶಿಕ್ಷಣ ಕ್ಷೇತ್ರದ ಉನ್ನತಿಗೆ ಪೂರಕ ಕ್ರಮಗಳಾಗಿವೆ. ಶಿಕ್ಷಣದ ಗುಣಮಟ್ಟ, ಪಠ್ಯಕ್ರಮ ನವೀಕರಣ, ಶಿಕ್ಷಕರ ತರಬೇತಿ, ಮೌಲ್ಯಮಾಪನ, ವಿ.ವಿ ಮಟ್ಟದ ಸಂಶೋಧನೆಗೆ ಪ್ರಾಶಸ್ತ್ಯದ ಅಗತ್ಯವಿತ್ತು.</p><p>– ಜ್ಯೋತಿ, <em>ಸಹ ಪ್ರಾಧ್ಯಾಪಕಿ, ತುಮಕೂರು ವಿಶ್ವವಿದ್ಯಾಲಯ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>