ಅಲ್ಲದೆ ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೆ ಕಾವೇರಿ–ಪೆನ್ನಾರ್ ಸೇರಿದಂತೆ ಐದು ನದಿ ಜೋಡಣೆಯ ನಿರ್ಧಾರ ರಾಷ್ಟ್ರವನ್ನು ಸಮೃದ್ಧ ಮಾಡುವಲ್ಲಿ ಮಹತ್ವ ಪಡೆದುಕೊಂಡಿದೆ. ಇದರೊಟ್ಟಿಗೆ ಸಹಕಾರಿ ಸಂಘಗಳ ಮೇಲಿನ ತೆರಿಗೆಯನ್ನು ಇಳಿಸಿರುವುದು, ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಆದ್ಯತೆ ಕೊಟ್ಟಿರುವುದು, ಹೊಸ ಕಂಪನಿಗಳಿಗೆ ತೆರಿಗೆ ವಿನಾಯಿತಿ, ದೇಶದಲ್ಲಿ ಡಿಜಿಟಲ್ ರೂಪಾಯಿ ಘೋಷಣೆ, ಔಷಧಗಳ ಮೇಲಿನ ಸುಂಕ ಇಳಿಕೆಯಂತಹ ಜನಪರ ಘೋಷಣೆಗಳನ್ನು ಗಮನಿಸಿದರೆ ಇದೊಂದು ಜನಪ್ರಿಯ ಮತ್ತು ಜನಪರವಾದ, ರೈತಪರವಾದ ಬಜೆಟ್ ಎನ್ನುವುದರಲ್ಲಿ ಅನುಮಾನವಿಲ್ಲ. ಕೊರೊನಾ ವೇಳೆ ಮಕ್ಕಳು ಅನುಭವಿಸಿದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು 'ಪಿಎಂ ಇ–ವಿದ್ಯಾ’ ಯೋಜನೆ ಅಡಿಯಲ್ಲಿ ‘ಒನ್ ಕ್ಲಾಸ್ ಒನ್ ಟಿವಿ ಚಾನೆಲ್’ ಅನ್ನು ವಿಸ್ತರಿಸಿದ್ದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. 5ಜಿ ಹರಾಜಿಗೆ ಕ್ರಮ ಕೈಗೊಂಡಿರುವುದು ದೂರ ಸಂಪರ್ಕ ಕ್ಷೇತ್ರದಲ್ಲಿ ದೇಶವನ್ನು ಹೊಸ ಮೈಲಿಗಲ್ಲಿನತ್ತ ಕೊಂಡೊಯ್ಯಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.