ನವದೆಹಲಿ: ಮಂಗಳೂರು ಬಳಿಯ ಪಾದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಭೂಗತ ಕಚ್ಚಾ ತೈಲ ಸಂಗ್ರಹಾಗಾರದ ಕೆಲ ಭಾಗಗಳಲ್ಲಿ ತೈಲ ಸಂಗ್ರಹಿಸಲು ಅಬುಧಾಬಿ ನ್ಯಾಷನಲ್ ಆಯಿಲ್ ಕಾರ್ಪೊರೇಷನ್ (ಎಡಿಎನ್ಒಸಿ) ಮತ್ತು ಭಾರತ ಒಪ್ಪಂದಕ್ಕೆ ಸಹಿ ಹಾಕಿವೆ.
‘ಗುತ್ತಿಗೆ ಒಪ್ಪಂದದಡಿ ತೈಲ ಸಂಗ್ರಹಕ್ಕೆ ‘ಎಡಿಎನ್ಒಸಿ’ಗೆ ಅವಕಾಶ ನೀಡಲಾಗುವುದು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಪಾದೂರು ಸಂಗ್ರಹಾಗಾರದ ಒಟ್ಟಾರೆ ಸಾಮರ್ಥ್ಯ 25 ಲಕ್ಷ ಟನ್ ಇದೆ. ಇದರಲ್ಲಿ ಅರ್ಧದಷ್ಟು ಅಂದರೆ 12.5 ಲಕ್ಷ ಟನ್ನಷ್ಟು ಅಬುಧಾಬಿ ಕಂಪನಿ ತನ್ನ ತೈಲವನ್ನು ಸಂಗ್ರಹಿಸಿ ಇಡಲಿದೆ.
ಇಲ್ಲಿ ಸಂಗ್ರಹಿಸುವ ತೈಲವನ್ನು ಸ್ಥಳೀಯ ತೈಲಾಗಾರಗಳಿಗೆ ಮಾರಾಟ ಮಾಡಲು ಅಬುಧಾಬಿ ಕಂಪನಿಗೆ ಈ ಒಪ್ಪಂದ ಅವಕಾಶ ನೀಡಿದೆ. ಆದರೆ, ತುರ್ತು ಸಂದರ್ಭದಲ್ಲಿ ಈ ಕಚ್ಚಾ ತೈಲವನ್ನು ಕೇಂದ್ರ ಸರ್ಕಾರವೇ ಬಳಸಿಕೊಳ್ಳಬಹುದಾಗಿದೆ.
ವಿದೇಶಿ ತೈಲ ಕಂಪನಿಗಳು ಪಾದೂರಿನ ಬಳಿ ಇರುವ ಸಂಗ್ರಹಾಗಾರದಲ್ಲಿ ತೈಲ ಸಂಗ್ರಹಿಸಿಡಲು ಕೇಂದ್ರ ಸಚಿವ ಸಂಪುಟ ಕಳೆದವಾರ ವಷ್ಟೇ ಒಪ್ಪಿಗೆ ನೀಡಿತ್ತು.
ಡಿಸೆಂಬರ್ನಿಂದ ತೈಲ ಉತ್ಪಾದನೆ ಕಡಿತ: 10 ಲಕ್ಷ ಬ್ಯಾರೆಲ್ ತಗ್ಗಿಸಲು ಸೌದಿ ಕರೆ
ತೈಲ ಉತ್ಪಾದನೆ ತಗ್ಗಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿರುವುದು ಮಾರುಕಟ್ಟೆಯ ಮೇಲೆ ತಕ್ಷಣದ ಪ್ರಭಾವ ಬೀರಿದೆ. ಸೋಮವಾರ ಕಚ್ಚಾ ತೈಲ ದರಗಳು ಏರಿಕೆ ಕಂಡಿವೆ.
ನಾಲ್ಕು ದಿನಗಳಿಂದ ಇಳಿಮುಖವಾಗಿದ್ದ ಬ್ರೆಂಟ್ ಕಚ್ಚಾ ತೈಲ ದರ ಸೋಮವಾರಶೇ 2.09ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್ಗೆ 71.62 ಡಾಲರ್ಗೆ (₹ 5,199) ತಲುಪಿದೆ.
ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸಲು ದಿನಕ್ಕೆ 10 ಲಕ್ಷ ಬ್ಯಾರೆಲ್ನಷ್ಟು ಉತ್ಪಾದನೆ ತಗ್ಗಿಸುವಂತೆತೈಲ ಉತ್ಪಾದನಾ ರಾಷ್ಟ್ರಗಳಿಗೆಸೌದಿ ಅರೇಬಿಯಾ ಕರೆ ಕೊಟ್ಟಿದೆ.
‘ತೈಲ ದರ ಇನ್ನಷ್ಟು ಇಳಿಕೆ ಕಾಣುವುದನ್ನು ತಡೆಯಲು ಉತ್ಪಾದನೆ ತಗ್ಗಿಸುವುದು ಅನಿವಾರ್ಯ ಎನ್ನುವುದುಭಾನುವಾರ ನಡೆದ ಸಭೆಯಲ್ಲಿ ಕಂಡುಕೊಳ್ಳಲಾಗಿದೆ.ಸೌದಿ ಅರೇಬಿಯಾ ಮುಂದಿನ ತಿಂಗಳಿನಿಂದ ಪ್ರತಿ ದಿನಕ್ಕೆ 5 ಲಕ್ಷ ಬ್ಯಾರೆಲ್ನಷ್ಟು ಉತ್ಪಾದನೆಯನ್ನು ತಗ್ಗಿಸಲಿದೆ’ ಎಂದುಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್ ಫಲಿಹ್ ತಿಳಿಸಿದ್ದಾರೆ.