ರಾಯಚೂರು: ರೈತರಪರ, ಬಡವರ ಪರ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕೇಂದ್ರದ ನರೇಂದ್ರ ಮೋದಿ ಪಾಠ ಕಲಿಯಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಜನಾಶೀರ್ವಾದ ಯಾತ್ರೆಗಾಗಿ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪರಿಶಿಷ್ಟ ಪಂಗಡದ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ಮಾಡಿದ್ದೇವೆ. ಬಡವರ ಪರವಾಗಿದ್ದರೆ ಹಸಿದವರಿಗಾಗಿ ದೇಶದ ತುಂಬ ಇಂದಿರಾ ಕ್ಯಾಂಟಿನ್ ಆರಂಭಿಸಬೇಕು ಎಂದು ಸವಾಲು ಹಾಕಿದರು.
ಉದ್ಯೋಗ ಸೃಷ್ಟಿ ಕರ್ನಾಟಕದಲ್ಲಿ ಮಾಡಿದ್ದಾರೆ. ಆದರೆ ದೇಶದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವ ಮಾತಿನಂತೆ ಮೋದಿ ನಡೆದುಕೊಂಡಿಲ್ಲ ಎಂದರು.
ಪರಿಶಿಷ್ಟರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ 27,700 ಕೋಟಿ ಅನುದಾನ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಇಡೀ ದೇಶಕ್ಕೆ 54 ಸಾವಿರ ಕೋಟಿ ನೀಡಿದೆ. ಕೇಂದ್ರದ ಒಟ್ಟು ಅನುದಾನದಲ್ಲಿ ಶೇ 50ರಷ್ಟು ಕರ್ನಾಟಕ ಒಂದೇ ರಾಜ್ಯ ನೀಡಿದೆ ಎಂದರು.