ನವದೆಹಲಿ: ರೆವಿನ್ಯೂ ಕಾರ್ಯದರ್ಶಿಯಾಗಿ ಅಜಯ್ ಭೂಷಣ್ ಪಾಂಡೆ ಅವರನ್ನು ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ.
ಇದೇ 30ರಂದು ಹಸ್ಮುಖ್ ಆಧಿಯಾ ಅವರು ನಿವೃತ್ತರಾಗಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಈ ನೇಮಕ ನಡೆದಿದೆ.
ಪಾಂಡೆ ಅವರು ಸದ್ಯ,ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಇಒ ಆಗಿದ್ದು, ಮುಂದಿನ ಆದೇಶದ
ವರೆಗೆ ಈ ಹೊಣೆಗಾರಿಕೆಯನ್ನೂ ನಿಭಾಯಿಸಲಿದ್ದಾರೆ.
ಕೃತಜ್ಞತೆ ಸಲ್ಲಿಸಿದ ಆಧಿಯಾ: ಈ ಕುರಿತು ಸರಣಿ ಟ್ವೀಟ್ ಮಾಡಿರುವ ಆಧಿಯಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೋದಿ ಮತ್ತು ಜೇಟ್ಲಿ ಅವರ ನಾಯಕತ್ವದಲ್ಲಿ ನಾಲ್ಕು ವರ್ಷಗಳವರೆಗೆ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡುವ ಸದವಕಾಶ ದೊರೆತಿದೆ. ಈ ಅವಧಿಯಲ್ಲಿ ದೇಶಕ್ಕಾಗಿ ನಾನು ಮಾಡಿರುವ ಕೆಲಸಗಳ ಬಗ್ಗೆ ತೃಪ್ತಿ ಹೊಂದಿದ್ದೇನೆ. ಇದೇ ಭಾವನೆಯಿಂದ ನವೆಂಬರ್ 30ರಂದು ನಿವೃತ್ತಿಯಾಗಲಿದ್ದೇನೆ. ನನ್ನೊಟ್ಟಿಗೆ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೃತಜ್ಞನಾಗಿರುತ್ತೇನೆ’ ಎಂದು ಆಧಿಯಾ ಹೇಳಿದ್ದಾರೆ.
ಗುಜರಾತ್ ಕೇಡರ್ನ 1981ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅವರು 2014ರ ನವೆಂಬರ್ನಲ್ಲಿ ಹಣಕಾಸು ಸೇವೆಗಳ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
ಜೇಟ್ಲಿ ಶ್ಲಾಘನೆ:ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಓರ್ವ ವಿವೇಚನಾಶೀಲ ನಾಗರಿಕ ಸೇವಕರಾಗಿದ್ದು, ವೃತ್ತಿಪರವಾಗಿ ತಮ್ಮ ಹುದ್ದೆ ನಿಭಾಯಿಸಿದ್ದಾರೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಡಾ. ಹಸ್ಮುಖ್ ಆಧಿಯಾ ನಿವೃತ್ತರಾಗಲಿದ್ದಾರೆ’ ಎನ್ನುವಫೇಸ್ಬುಕ್ ಪೋಸ್ಟ್ನಲ್ಲಿ ಅವರ ಕಾರ್ಯವೈಖರಿಯ ಬಗ್ಗೆ ಜೇಟ್ಲಿ ಗುಣಗಾನ ಮಾಡಿದ್ದಾರೆ.
‘ಏಕರೂಪದ ತೆರಿಗೆ ವ್ಯವಸ್ಥೆಯಾಗಿರುವ ಜಿಎಸ್ಟಿ ಜಾರಿಯ ಶ್ರೇಯ ಆಧಿಯಾ ಅವರಿಗೇ ಸಲ್ಲಬೇಕು.ಆಧಿಯಾ ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿರುವ ಅವರ ಸಿಬ್ಬಂದಿಯ ನೆರವಿನಿಂದ ಸಕಾಲಕ್ಕೆ ಜಾರಿಗೊಳಿಸಲು ಸಾಧ್ಯವಾಯಿತು’ ಎಂದಿದ್ದಾರೆ.
‘ಅವರೊಬ್ಬ ಪ್ರಶ್ನಾತೀತ, ಶಿಸ್ತುಬದ್ಧ ಅತ್ಯಂತ ಸಮರ್ಥ ನಾಗರೀಕ ಸೇವಕರಾಗಿದ್ದಾರೆ. ನಿವೃತ್ತಿಯ ಬಳಿಕವೂ ಅವರ ಸಾಮರ್ಥ್ಯ ಮತ್ತು ಅನುಭವವನ್ನು ಸರ್ಕಾರ ಬಳಸಿಕೊಳ್ಳಲಿದೆ’ ಎಂದು ಜೇಟ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.