ಮುಂಬೈ: ರೈತರಿಗೆ ಸುಲಭವಾಗಿ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಇದೇ 15ರವರೆಗೆ ತನ್ನ ಎಲ್ಲ ಶಾಖೆಗಳಲ್ಲಿ 'ಬರೋಡಾ ಕಿಸಾನ್ ಪಾಕ್ಷಿಕ’ ಕಾರ್ಯಕ್ರಮ ಹಮ್ಮಿಕೊಂಡಿದೆ.
‘ರೈತರು ಮತ್ತು ಬ್ಯಾಂಕ್ ನಡುವಣಸಂಬಂಧ ವೃದ್ಧಿಗೆ15 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ ವತಿಯಿಂದ ಬರೋಡಾ ಕಿಸಾನ್ ದಿನಾಚರಣೆಯನ್ನೂ ಆಯೋಜಿಸಲಾಗುವುದು’ ಎಂದು ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
‘ಕಿಸಾನ್ ಪಾಕ್ಷಿಕದ ಅಂಗವಾಗಿ ಕೃಷಿ ಮೇಳಗಳು, ಹಳ್ಳಿಗಳಲ್ಲಿ ರಾತ್ರಿ ವೇಳೆ ರೈತರ ಸಭೆ, ರೈತರು ಮತ್ತು ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ, ರೈತರ ಸಮಾವೇಶ, ಆರ್ಥಿಕ ಸಾಕ್ಷರತಾ ಶಿಬಿರ, ಸಾಧಕ ರೈತರಿಗೆ ಸನ್ಮಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಕೃಷಿ ಕ್ಷೇತ್ರದ ಪ್ರಗತಿಯ ವೇಗ ಹೆಚ್ಚಿಸುವುದು ಮತ್ತು ಹಣದ ಹರಿವು ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದು ಅವರು ತಿಳಿಸಿದ್ದಾರೆ.