ನವದೆಹಲಿ (ಪಿಟಿಐ): ಕೆಲವು ಉದ್ಯೋಗಿಗಳ ವಿರುದ್ಧ ಅನುಚಿತ ವರ್ತನೆಯ ಆರೋಪದ ಅಡಿಯಲ್ಲಿ ದೂರು ದಾಖಲಿಸಿ, ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಭಾರತ್ಪೆ ಕಂಪನಿ ತಿಳಿಸಿದೆ.
ಕಾರ್ಪೊರೇಟ್ ಆಡಳಿತದ ಪರಿಶೀಲನೆಯ ನಂತರದಲ್ಲಿ ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಅಶ್ನೀರ್ ಗ್ರೋವರ್ ಅವರು ವ್ಯವಸ್ಥಾಪಕ ನಿರ್ದೇಶಕ ಆಗಿದ್ದ ಸಂದರ್ಭದಲ್ಲಿ ಕಾರ್ಪೊರೇಟ್ ಆಡಳಿತದಲ್ಲಿ ಲೋಪಗಳು ಆಗಿದ್ದವು ಎಂಬ ಆರೋಪಗಳು ಕೇಳಿಬಂದ ಕಾರಣ ಈ ಪರಿಶೀಲನೆ ನಡೆದಿದೆ.
ಭಾರತ್ಪೆ ಕಂಪನಿಯು ತನ್ನ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಗ್ರೋವರ್ ಅವರು ಕೋಟಕ್ ಮಹೀಂದ್ರ ಬ್ಯಾಂಕ್ ಸಿಬ್ಬಂದಿ ಜೊತೆ ನಿಂದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪ ಬಂದ ನಂತರ ರಜೆಯ ಮೇಲೆ ತೆರಳಿದ್ದರು.
ಕಂಪನಿಯು ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಅವರನ್ನು ಮಾರ್ಚ್ನಲ್ಲಿ ವಜಾಗೊಳಿಸಿತು. ನಂತರ ಗ್ರೋವರ್ ಅವರು ಕಂಪನಿಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದರು. ತಪ್ಪು ಇನ್ವಾಯ್ಸ್ ನೀಡಿದ ಹಲವು ವರ್ತಕರನ್ನು ನಿರ್ಬಂಧಿಸಿರುವುದಾಗಿಯೂ ಕಂಪನಿಯು ಮಂಗಳವಾರ ಹೇಳಿದೆ.