ಬೆಳಗಾವಿ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘವಾದ ಅಡ್ಡ ಪರಿಣಾಮಗಳಾಗುತ್ತವೆ. ಹೀಗಾಗಿ, ಈ ವ್ಯಸನದಿಂದ ದೂರವಿರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳಗಾವಿ ವಿಭಾಗದ ನಿರ್ವಹಣಾ ಉಸ್ತುವಾರಿ ಅಶೋಕ ಬಾದಾಮಿ ಹೇಳಿದರು.
ಇಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್, ಭರತೇಶ ಹೋಮಿಯೋಪತಿ ವೈದ್ಯಕೀಯ ಕಾಲೇಜು ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ತಂಬಾಕುರಹಿತ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ, ‘ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು’ ಎಂದರು.
ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ವಿಕಾಸ ಕಲಘಟಗಿ ಇದ್ದರು. ಪ್ರೊ.ರಂಜನಾ ಉಪಾಶಿ ನಿರೂಪಿಸಿದರು.
ವಿಶ್ವ ತಂಬಾಕು ಉತ್ಪನ್ನ ವಿರೋಧಿ ದಿನಾಚರಣೆ
ರಾಮದುರ್ಗ: ‘ಯಾವುದೇ ರೂಪದ ತಂಬಾಕು ಸೇವನೆ ಮನುಷ್ಯನನ್ನು ಹಂತ ಹಂತವಾಗಿ ಸಾವಿಗೆ ಆಹ್ವಾನಿಸುತ್ತದೆ’ ಎಂದು ವಿಶ್ವಭಾರತಿ ಕಾಲೇಜಿನ ದೈಹಿಕ ಶಿಕ್ಷಣ ಪ್ರಾಧ್ಯಾಪಕ ಪ್ರೊ. ಬಿ.ಎಸ್. ಗುಡದಿ ಹೇಳಿದರು.
ಕಟಕೋಳದ ಕವಿವ ಸಮಿತಿಯ ಸಚ್ಚಿದಾನಂದ ಸ್ವಾಮೀಜಿ ವಿರಕ್ತಮಠ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಂಥಪಾಲಕಿ ವರ್ಷಾ ಖಂಡೋಜಿ ಮಾತನಾಡಿ, ‘ತಂಬಾಕು ತ್ಯಜಿಸಿ ಬದುಕು ಸಂಭ್ರಮಿಸಿ’ ಎಂದರು. ಪ್ರಾಚಾರ್ಯ ಎಸ್.ಎಂ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು.
ಸಾಕ್ಷರತಾ ಶಿಬಿರ
ಗೋಕಾಕ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ‘ವಿಶ್ವ ತಂಬಾಕು ವಿರೋಧಿ ದಿನಾಚರಣೆ’ ಹಿನ್ನೆಲೆಯಲ್ಲಿ ವಕೀಲರಿಗೆ ಸಾಕ್ಷರತಾ ಶಿಬಿರ ಜೂನ್ 1 ರಂದು ಬೆಳಿಗ್ಗೆ 10ಕ್ಕೆ ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ.
12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಎಂ.ಎಂ. ಬಾನಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವಿಮಲ್ ನಂದಗಾಂವ, 1ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಸತೀಶ ಬಾಳಿ, 2ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಚಂದ್ರಪ್ಪ ಹುನ್ನೂರು, 1ನೇ ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಧೀಶ ವಿರೇಶಕುಮಾರ ಸಿ.ಕೆ., 2ನೇ ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಮೋಹನ್ ಎಸ್. ಪೋಳ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಆರ್.ಎಸ್. ಬೆಣಚಿನಮರಡಿ ಆಗಮಿಸುವರು.
ವೈದ್ಯಾಧಿಕಾರಿ ಡಾ. ಉದಯ ಅಂಗಡಿ 'ತಂಬಾಕಿನ ದುಷ್ಪರಿಣಾಮಗಳು ಮತ್ತು ತಂಬಾಕು ಸೇವನೆ ತಡೆಗಟ್ಟುವಿಕೆ ಕ್ರಮಗಳು’ ವಿಷಯ ಕುರಿತು ಉಪನ್ಯಾಸ ನೀಡುವರು. ವಕೀಲರ ಸಂಘದ ಅಧ್ಯಕ್ಷ ಎಸ್.ವಿ. ದೇಮಶೆಟ್ಟಿ ಅಧ್ಯಕ್ಷತೆ ವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.