ಬೆಂಗಳೂರು: ಉದ್ದಿಮೆ ವಹಿವಾಟಿಗೆ ಸಂಬಂಧಿಸಿದ ಇಂಗ್ಲಿಷ್ ಭಾಷೆಯ ಪ್ರಮುಖ ಖಾಸಗಿ ಟೆಲಿವಿಷನ್ ವಾಹಿನಿ ಬಿಸಿನೆಸ್ ಟೆಲಿವಿಷನ್ ಇಂಡಿಯಾ (ಬಿಟಿವಿಐ), ಬಂಡವಾಳ ಪೇಟೆಯಲ್ಲಿನ ಹಣ ಹೂಡಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಂಡಿದೆ.
ಮುಂಬೈ, ಸೂರತ್, ಅಹಮದಾಬಾದ್ ಮತ್ತು ದೆಹಲಿಯಲ್ಲಿ ಯಶಸ್ವಿಯಾಗಿ ನಡೆದ ಕಾರ್ಯಕ್ರಮವನ್ನು ಈಗ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ನಂತರ, ಹೂಡಿಕೆದಾರರು ಷೇರುಪೇಟೆಯಲ್ಲಿನ ಹೂಡಿಕೆ ಅವಕಾಶಗಳು ಮತ್ತು ನಂತರದ ದಿನಗಳಲ್ಲಿ ಕಂಡು ಬರಲಿರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವ ಬಗೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಪರಿಣತರ ಚರ್ಚೆ: ಹಣಕಾಸು ಪರಿಣತರಾದ ಆಪ್ಟಿಮಾ ಮನಿ ಮ್ಯಾನೇಜರ್ಸ್ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಮಥ್ಪಾಲ್, ದೇವ್ ಮಂತ್ರ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ವಿಕಾಸ್ ಟಿ ಮತ್ತು ಐಐಎಫ್ಎಲ್ನ ಮಾರುಕಟ್ಟೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಂಜೀವ್ ಭಾಸಿನ್ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮಾರುಕಟ್ಟೆಯಅನಿಶ್ಚಿತ ಪರಿಸ್ಥಿತಿಯಲ್ಲಿ ಲಾಭದಾಯಕ ಹೂಡಿಕೆ ಬಗ್ಗೆ ಇವರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಜತೆಗೆ ಸೂಕ್ತ ಸಲಹೆಗಳನ್ನೂ ನೀಡಲಿದ್ದಾರೆ. ‘ಬಿಟಿವಿಐ’ನ ಚಾನೆಲ್ ನಿರ್ದೇಶಕ ಮುರಳೀಧರ್ ಸ್ವಾಮಿನಾಥನ್ ಅವರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಇದಾದ ನಂತರ, ಸಭಿಕರು ಈ ಪರಿಣತರಿಗೆ ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು.
‘ದೇಶದ ವಿವಿಧ ನಗರಗಳಲ್ಲಿ ನಡೆದ ಈ ಬಗೆಯ ಕಾರ್ಯಕ್ರಮಗಳಲ್ಲಿ ಹೂಡಿಕೆದಾರರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾರುಕಟ್ಟೆಯಲ್ಲಿನ ಸವಾಲು ಮತ್ತು ಅವಕಾಶಗಳ ಬಗ್ಗೆ ಹೆಚ್ಚೆಚ್ಚು ಹೂಡಿಕೆದಾರರು ತಿಳಿದುಕೊಳ್ಳಬೇಕೆಂಬ ರೀತಿಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಜನರು ಉಳಿತಾಯ ಪ್ರವೃತ್ತಿ ರೂಢಿಸಿಕೊಂಡು, ಬಂಡವಾಳ ಪೇಟೆಯಲ್ಲಿ ಹೂಡಿಕೆ ಮಾಡಿ, ಲಾಭ ಮಾಡಿಕೊಂಡು ವೈಯಕ್ತಿಕ ನೆಲೆಯಲ್ಲಿ ಸಂಪತ್ತು ಸೃಷ್ಟಿಸಲು ನೆರವಾಗುವುದು ಈ ಕಾರ್ಯಕ್ರಮದ ಹಿಂದಿರುವ ಚಿಂತನೆಯಾಗಿದೆ’ ಎಂದು ‘ಬಿಟಿವಿಐ’ನ ಮಾರುಕಟ್ಟೆ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಅನುಜ್ ಕಟಿಯಾರ್ ಹೇಳಿದ್ದಾರೆ.
‘ನಮ್ಮ ವೀಕ್ಷಕರ ಜತೆ ನೇರ ಸಂಪರ್ಕ ಸಾಧಿಸಲು ಮತ್ತು ಇತರ ವೇದಿಕೆಗಳ ಮೂಲಕ ಹಣಕಾಸು ಸಲಹೆಗಾಗಿ ನಮ್ಮನ್ನು ಸಂಪರ್ಕಿಸಲು ಮನಿ ಮಂತ್ರ ನೆರವಾಗುತ್ತಿದೆ’ ಎಂದೂ ಹೇಳಿದ್ದಾರೆ.
ರೇಸ್ಕೋರ್ಸ್ ರಸ್ತೆಯಲ್ಲಿನ ಎಂ. ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಈ ಕಾರ್ಯಕ್ರಮವು ಇದೇ 15ರ (ಶುಕ್ರವಾರ) ಸಂಜೆ 5 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತರು www.btvi.in/moneymantra ಅಂತರ್ಜಾಲ ತಾಣದಲ್ಲಿ ಹೆಸರು ನೋಂದಾಯಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.