ನವದೆಹಲಿ: ಕೇಂದ್ರ ಸರ್ಕಾರದ 2019–20ನೆ ಸಾಲಿನ ಬಜೆಟ್ ದಾಖಲೆಗಳ ಮುದ್ರಣಕ್ಕೆ ಸೋಮವಾರ ಇಲ್ಲಿ ಔಪಚಾರಿಕ ಚಾಲನೆ ನೀಡಲಾಯಿತು.
ಇದಕ್ಕೆ ಪೂರಕವಾಗಿ ನಡೆದ ಸಾಂಪ್ರದಾಯಿಕ ‘ಹಲ್ವಾ ಸಮಾರಂಭ’ದಲ್ಲಿ ಹಣಕಾಸು ರಾಜ್ಯ ಸಚಿವರಾದ ಶಿವ ಪ್ರತಾಪ್ ಶುಕ್ಲಾ, ಪಿ. ರಾಧಾಕೃಷ್ಣನ್, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ಅಮೆರಿಕೆಗೆ ತೆರಳಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗೈರುಹಾಜರಾಗಿದ್ದರು.
‘ಹಲ್ವಾ ಸಮಾರಂಭ’ದಲ್ಲಿ ಸಂಪ್ರದಾಯದಂತೆ ದೊಡ್ಡ ಕಡಾಯಿಯಲ್ಲಿ ಸಿಹಿ ತಿನಿಸು ತಯಾರಿಸಿ, ಸಚಿವಾಲಯದ ಎಲ್ಲ ಸಿಬ್ಬಂದಿಗೆ ಹಂಚಲಾಯಿತು. ಹಲ್ವಾ ವಿತರಿಸಿದ ನಂತರ, ಬಜೆಟ್ ತಯಾರಿಕೆ ಮತ್ತು ಮುದ್ರಣ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಬಹುತೇಕ ಸಿಬ್ಬಂದಿಯು ಬಜೆಟ್ ಮಂಡನೆಯಾಗುವವರೆಗೆ ಕಚೇರಿಯಲ್ಲಿಯೇ ಉಳಿಯಲಿದ್ದಾರೆ. ಈ ಅವಧಿಯಲ್ಲಿ ಅವರು ತಮ್ಮ ಕುಟುಂಬದ ಸದಸ್ಯರನ್ನು ಯಾವುದೇ ಬಗೆಯಲ್ಲಿ (ಮೊಬೈಲ್, ಇ–ಮೇಲ್) ಸಂಪರ್ಕಿಸುವಂತಿಲ್ಲ. ಹಿರಿಯ ಅಧಿಕಾರಿಗಳಷ್ಟೆ ಮನೆಗೆ ತೆರಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.