ನವದೆಹಲಿ (ಪಿಟಿಐ): ಐಡಿಬಿಐ ಬ್ಯಾಂಕ್ನ ಹಣಕಾಸು ಪರಿಸ್ಥಿತಿ ಸುಧಾರಿಸಿ ಲಾಭದ ಹಾದಿಗೆ ತರುವ ಉದ್ದೇಶಕ್ಕೆ ಕೇಂದ್ರ ಸರ್ಕಾರವು ₹ 9,300 ಕೋಟಿಗಳ ಪುನರ್ಧನ ನೆರವು ಘೋಷಿಸಿದೆ.
ಈ ನೆರವಿನ ಮೊತ್ತದಲ್ಲಿ ಭಾರತೀಯ ಜೀವವಿಮಾ ನಿಗಮದ (ಎಲ್ಐಸಿ) ₹ 4,743 ಕೋಟಿ ಮತ್ತು ಸರ್ಕಾರದ ₹ 4,557 ಕೋಟಿ ಕೊಡುಗೆ ಇರಲಿದೆ. ಬ್ಯಾಂಕ್ನಲ್ಲಿ ಸದ್ಯಕ್ಕೆ ಎಲ್ಐಸಿಯ ಪಾಲು ಬಂಡವಾಳ ಶೇ 51 ಮತ್ತು ಸರ್ಕಾರದ ಪಾಲು ಶೇ 46ರಷ್ಟಿದೆ.
ಬ್ಯಾಂಕ್ ಸ್ವಂತ ಬಲದ ಆಧಾರದಲ್ಲಿ ಹೆಚ್ಚುವರಿ ಬಂಡವಾಳವನ್ನೂ ಸಂಗ್ರಹಿಸಲಿದೆ. ಈ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧಿತ ಕ್ರಮಗಳಿಂದ ಹೊರಬರಲು ಪ್ರಯತ್ನಿಸಲಿದೆ.
ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬಂಡವಾಳ ಪುನರ್ಧನದ ಈ ನಿರ್ಧಾರ ಕೈಗೊಂಡಿದೆ.
ಈ ವರ್ಷದ ಜನವರಿಯಲ್ಲಿ ಬ್ಯಾಂಕ್ನಲ್ಲಿನ ಸರ್ಕಾರದ ಪಾಲು ಬಂಡವಾಳವು ಶೇ 86 ರಿಂದ ಶೇ 46.46ಕ್ಕೆ ಇಳಿದಿತ್ತು. ‘ಎಲ್ಸಿಐ’ಯ ಪಾಲು ಶೇ 51ಕ್ಕೆ ಏರಿಕೆಯಾಗಿತ್ತು.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ನಷ್ಟವು ₹ 3,801 ಕೋಟಿಗೆ ತಲುಪಿತ್ತು. ಹಿಂದಿನ ವರ್ಷ ಈ ನಷ್ಟದ ಪ್ರಮಾಣವು ₹ 2,410 ಕೋಟಿಗಳಷ್ಟಿತ್ತು.
ಇಥೆನಾಲ್ ಖರೀದಿ ಬೆಲೆ ಹೆಚ್ಚಳ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಖರೀದಿಸುವ ಇಥೆನಾಲ್ನ ಪ್ರತಿ ಲೀಟರ್ ಬೆಲೆಯನ್ನು ಹೆಚ್ಚಿಸಲಾಗಿದೆ.
ಈ ದರ ಹೆಚ್ಚಳವು ಈ ವರ್ಷದ ಡಿಸೆಂಬರ್ 1ರಿಂದ 2020ರ ನವೆಂಬರ್ 30ರವರೆಗೆ ಅನ್ವಯವಾಗಲಿದೆ.