ಇಂದೋರ್: ಹವಾಯಿ ಚಪ್ಪಲಿ ಹಾಕಿಕೊಳ್ಳುವ ವ್ಯಕ್ತಿಗೂ ಎಟಕುವ ದರದಲ್ಲಿ ವಿಮಾನಯಾನ ಸೇವೆಗಳನ್ನು ಒದಗಿಸುವ ಗುರಿ ಕೇಂದ್ರ ಸರ್ಕಾರದ್ದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
ದೇಶಿ ನಾಗರಿಕ ವಿಮಾನಯಾನ ವಲಯದ ಬೆಳವಣಿಗೆಯ ಭಾಗವಾಗಿ ನಾಲ್ಕು ವರ್ಷಗಳಲ್ಲಿ ಹಲವು ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ, ಹೊಸ ಮಾರ್ಗಗಳಲ್ಲಿ ವಿಮಾನಯಾನ ಸೇವೆ ಆರಂಭವಾಗಿದೆ ಎಂದು ಸಿಂಧಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಮಾನಯಾನ ಸೇವೆ ಒದಗಿಸುವ ಬಯಕೆ ಹೊಂದಿದ್ದೇವೆ. ಹವಾಯಿ ಚಪ್ಪಲಿ ಹಾಕುವ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿಸುವಂತೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಮತ್ತೆ ಹೇಳಿದ್ದಾರೆ. ಇದನ್ನು ಸಾಧ್ಯವಾಗಿಸುವ ಶಕ್ತಿ ನಮ್ಮಲ್ಲಿ ಇದೆ’ ಎಂದು ಸಚಿವರು ಹೇಳಿದರು.