ನವದೆಹಲಿ: ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಪರಿಹಾರದ ಬಾಕಿ ಮೊತ್ತ ₹ 86,912 ಕೋಟಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದರಲ್ಲಿ ಕರ್ನಾಟಕ ರಾಜ್ಯದ ಪಾಲು ₹ 8,633 ಕೋಟಿ ಇದೆ.
ಮಹಾರಾಷ್ಟ್ರ ರಾಜ್ಯಕ್ಕೆ ಅತಿ ಹೆಚ್ಚಿನ ₹ 14,145 ಕೋಟಿ ಜಿಎಸ್ಟಿ ಪರಿಹಾರ ದೊರೆತಿದೆ.
ಒಟ್ಟಾರೆ ಮೊತ್ತದಲ್ಲಿ ₹ 25 ಸಾವಿರ ಕೋಟಿಯನ್ನು ಜಿಎಸ್ಟಿ ಪರಿಹಾರ ನಿಧಿಯಿಂದ ನೀಡಲಾಗಿದೆ. ಉಳಿದ ₹ 61,912 ಕೋಟಿಯನ್ನು ಕೇಂದ್ರವು ತನ್ನ ಸೆಸ್ ಸಂಗ್ರಹದಿಂದ ನೀಡಿದೆ ಎಂದು ಹಣಕಾಸು ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟಾರೆ ಮೊತ್ತದಲ್ಲಿ ಏಪ್ರಿಲ್–ಮೇ ಅವಧಿಗೆ ₹ 17,973 ಕೋಟಿ ಹಾಗೂ ಫೆಬ್ರುವರಿ–ಮಾರ್ಚ್ ಅವಧಿಗೆ ₹ 21,322 ಕೋಟಿ ಹಾಗೂ 2022ರ ಜನವರಿವರೆಗೆ ಬಾಕಿ ಉಳಿಸಿಕೊಂಡಿದ್ದ ₹ 47,617 ಕೋಟಿ ಮೊತ್ತವು ಸೇರಿಕೊಂಡಿದೆ ಎಂದು ಅದು ಮಾಹಿತಿ ನೀಡಿದೆ.