ಚೆನ್ನೈ: ‘ತೆರಿಗೆ ವರಮಾನ ಹಂಚಿಕೆಯಲ್ಲಿ ಕೆಲ ರಾಜ್ಯಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ಶಿಫಾರಸು ನೀಡಲು ಕೇಂದ್ರ ಸರ್ಕಾರವು ಹದಿನೈದನೇ ಹಣಕಾಸು ಆಯೋಗಕ್ಕೆ ಸೂಚಿಸಿದೆ ಎನ್ನುವ ಆರೋಪ ಅಸಂಬದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
‘ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ದಾಖಲಿಸಿರುವ ರಾಜ್ಯಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿಯೇ ತೆರಿಗೆ ವರಮಾನ ಹಂಚಿಕೆ ಸೂತ್ರ ಸಿದ್ಧಪಡಿಸಲು ಸಲಹೆ ನೀಡಲಾಗಿದೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕೆಲ ಸ್ಥಾಪಿತ ಹಿತಾಸಕ್ತಿಗಳು ದುರುದ್ದೇಶದಿಂದ ಈ ವಿಷಯ ಪ್ರಸ್ತಾಪಿಸಿವೆ ಎಂದು ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.
ದಕ್ಷಿಣದ ಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಗಳ ಹಣಕಾಸು ಸಚಿವರು ಮಂಗಳವಾರ ತಿರುವನಂತಪುರದಲ್ಲಿ ಸಭೆ ನಡೆಸಿ ಕೇಂದ್ರದ ಪ್ರಸ್ತಾವಿತ ಸಲಹೆಯನ್ನು ತೀವ್ರವಾಗಿ ವಿರೋಧಿಸಿದ್ದವು.
ಸಭೆಗೆ ಗೈರುಹಾಜರಾಗಿದ್ದ ತಮಿಳುನಾಡು ಬುಧವಾರ, ಇತರ ರಾಜ್ಯಗಳ ನಿಲುವಿಗೆ ಸಹಮತ ವ್ಯಕ್ತಪಡಿಸಿತ್ತು.