ಮುಂಬೈ: ರಾಯಚೂರು ಜಿಲ್ಲೆಯ ಮಸ್ಕಿಯ ಮಲ್ಲಿಕಾರ್ಜುನ ಪಟ್ಟಣ ಸಹಕಾರ ಬ್ಯಾಂಕ್ ಮತ್ತು ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರ ಬ್ಯಾಂಕ್ಗಳ ಅರ್ಹ ಠೇವಣಿದಾರರಿಗೆ ಅಕ್ಟೋಬರ್ನಲ್ಲಿ ವಿಮಾ ಹಣ ಸಿಗಲಿದೆ ಎಂದು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ಭಾನುವಾರ ತಿಳಿಸಿದೆ.
ಒಟ್ಟು 17 ಸಹಕಾರ ಬ್ಯಾಂಕ್ಗಳ ಠೇವಣಿದಾರರಿಗೆ ವಿಮಾ ಪರಿಹಾರ ಮೊತ್ತ ಸಿಗಲಿದೆ. ಇದರಲ್ಲಿ ಮಹಾರಾಷ್ಟ್ರದ ಎಂಟು, ಉತ್ತರ ಪ್ರದೇಶದ ನಾಲ್ಕು, ದೆಹಲಿ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ತಲಾ ಒಂದು ಬ್ಯಾಂಕ್ ಸೇರಿವೆ ಎಂದು ಅದು ಹೇಳಿದೆ
ಈ ಸಹಕಾರ ಬ್ಯಾಂಕ್ಗಳ ಹಣಕಾಸು ಸ್ಥಿತಿ ಹದಗೆಟ್ಟಿದೆ ಎನ್ನುವ ಕಾರಣಕ್ಕಾಗಿ ಠೇವಣಿದಾರರು ಖಾತೆಯಿಂದ ಹಣ ಪಡೆಯುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಆರ್ಬಿಐ ವಿಧಿಸಿದೆ.
ಅರ್ಹ ಠೇವಣಿದಾರರು ವಿಮಾ ಮೊತ್ತ ಪಡೆಯಲು ತಮ್ಮ ಗುರುತನ್ನು ತಿಳಿಸುವ ಸೂಕ್ತ ದಾಖಲೆಗಳೊಂದಿಗೆ ಒಪ್ಪಿಗೆ ಪತ್ರವನ್ನು ಕಳುಹಿಸುವಂತೆ ಸೂಚನೆ ನೀಡಿದೆ. ಆಧಾರ್ ಸಂಖ್ಯೆಯ ಜೊತೆ ಜೋಡಣೆ ಆಗಿರುವ ಇನ್ನೊಂದು ಬ್ಯಾಂಕ್ ಖಾತೆಯ ವಿವರ ನೀಡುವಂತೆಯೂ ಕೇಳಿದೆ. ಈ ಖಾತೆಗೆ ವಿಮಾ ಹಣ ಸಂದಾಯ ಆಗಲಿದೆ ಎಂದು ತಿಳಿಸಿದೆ.