ತಿಪಟೂರು (ತುಮಕೂರು): ಒಂದೂವರೆ ವರ್ಷದ ಬಳಿಕ ಉಂಡೆ ಕೊಬ್ಬರಿ ಬೆಲೆ ದಾಖಲೆಯ ಕುಸಿತ ಕಂಡಿದ್ದು, ಕ್ವಿಂಟಲ್ ಕೊಬ್ಬರಿ ಧಾರಣೆ ₹13,500ಕ್ಕೆ ತಲುಪಿದೆ.
ಕೆಲವು ತಿಂಗಳ ಹಿಂದೆ ದಾಖಲೆಯ ₹17,400 ತಲುಪಿದ್ದ ಕೊಬ್ಬರಿಯ ಬೆಲೆ 45 ದಿನಗಳಿಂದ ಸತತವಾಗಿ ಕುಸಿತ ಕಾಣುತ್ತಿದೆ. ಇದೇ ವೇಗದಲ್ಲಿ ಸಾಗಿದರೆ ಕನಿಷ್ಠ ಬೆಂಬಲ ಬೆಲೆ ₹11 ಸಾವಿರಕ್ಕಿಂತಲೂ ಕಡಿಮೆಯಾಗುವ ಆತಂಕ ಬೆಳೆಗಾರರಿಗೆ ಎದುರಾಗಿದೆ.
ಕೇಂದ್ರ ಸರ್ಕಾರವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿರುವುದು ಕೊಬ್ಬರಿ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ತಾಳೆ, ಸೋಯಾ, ಸೂರ್ಯಕಾಂತಿ ಸೋಯಾದ ಕಚ್ಚಾ ಹಾಗೂ ರೀಫೈನ್ಡ್ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತದೆ. ಫೆಬ್ರುವರಿಯಿಂದ ಆಮದು ಸುಂಕ ಕಡಿಮೆ ಮಾಡಲಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊಬ್ಬರಿ ಎಣ್ಣೆಯ ಬೇಡಿಕೆ ಕುಸಿದಿದೆ. ಇದು ಕೊಬ್ಬರಿ ಧಾರಣೆ ಮೇಲೆ ಪರಿಣಾಮ ಬೀರಿದೆ.
*
ರೈತರು ಬೆಳೆಯುವ ಎಣ್ಣೆ ಕಾಳುಗಳನ್ನು ಗಣನೆಗೆ ತೆಗೆದುಕೊಂಡು ಆಮದನ್ನು ಪರಿಗಣಿಸಬೇಕು. ಇಲ್ಲವಾದಲ್ಲಿ ರೈತರ ಬೆಳೆಗೆ ಬೆಲೆ ಸಿಗುವುದಿಲ್ಲ. -ಶ್ರೀಕಾಂತ್ ಕೆಳಹಟ್ಟಿ, ಬೆಲೆ ಕಾವಲು ಸಮಿತಿ, ತಿಪಟೂರು
*
ಕೇಂದ್ರ ಸರ್ಕಾರ ಕೊಬ್ಬರಿ ಬೆಳೆಗಾರರ ಕಷ್ಟಗಳಿಗೆ ಸ್ಪಂದಿಸಿ ಕ್ವಿಂಟಲ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ₹15 ಸಾವಿರಕ್ಕೆ ನಿಗದಿ ಪಡಿಸಬೇಕು. -ಮಧುಸೂದನ್, ಎಪಿಎಂಸಿ ನಿರ್ದೇಶಕ, ತಿಪಟೂರು