ನವದೆಹಲಿ : ಆರ್ಥಿಕ ಮಂದಗತಿಗೆ ಕಾರಣವಾಗಿರುವ ಹಣಕಾಸು ಕ್ಷೇತ್ರದಲ್ಲಿನ ಬಿಕ್ಕಟ್ಟು ಬಗೆಹರಿಸಲು ಅಸಾಮಾನ್ಯ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ ಎಂದು ಕೇಂದ್ರ ಸರ್ಕಾರದ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗವು ಅಭಿಪ್ರಾಯಪಟ್ಟಿದೆ.
‘ಖಾಸಗಿ ವಲಯದ ಉದ್ದಿಮೆದಾರರಲ್ಲಿನ ಭೀತಿ ನಿವಾರಿಸಿ, ಹಣ ಹೂಡಿಕೆಗೆ ಅವಕಾಶ ಮಾಡಿಕೊಡುವ ಕ್ರಮಗಳನ್ನು ಸರ್ಕಾರ ಆದ್ಯತೆ ಮೇರೆಗೆ ಕೈಗೊಳ್ಳಬೇಕಾಗಿದೆ’ ಎಂದು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
‘ಹಣಕಾಸು ಕ್ಷೇತ್ರದಲ್ಲಿನ ಬಿಕ್ಕಟ್ಟು ಅಸಾಮಾನ್ಯ ಸ್ವರೂಪದ್ದಾಗಿದೆ. ಇಡೀ ಹಣಕಾಸು ವ್ಯವಸ್ಥೆಯೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಕಳೆದ 70 ವರ್ಷಗಳಲ್ಲಿ ಯಾರೊಬ್ಬರೂ ಇಂತಹ ಪರಿಸ್ಥಿತಿ ಎದುರಿಸಿಲ್ಲ.
‘ಸದ್ಯದ ಬಿಕ್ಕಟ್ಟಿಗೆ 2009 ರಿಂದ 2014ರ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಮಂಜೂರು ಮಾಡಿದ ಸಾಲಗಳು ಮರುಪಾವತಿ (ಎನ್ಪಿಎ) ಆಗದಿರುವುದೇ ಮುಖ್ಯ ಕಾರಣ. ‘ಎನ್ಪಿಎ’ ಕಾರಣದಿಂದಾಗಿ ಬ್ಯಾಂಕ್ಗಳು ಹೊಸದಾಗಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ.
‘ಗೃಹ ಸಾಲ ಹೆಚ್ಚಳದ ಬೇಡಿಕೆಯನ್ನು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿರ್ವಹಿಸಲು ಸಾಧ್ಯವಾಗದೆ ನಗದು ಬಿಕ್ಕಟ್ಟು ಎದುರಿಸುತ್ತಿವೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮದಿಂದ ಆರ್ಥಿಕತೆ ಮಂದಗತಿಯಲ್ಲಿ ಇದೆ ಎಂದು ಅವರು ವಿವರಿಸಿದ್ದಾರೆ.
"ಪ್ರತಿಯೊಬ್ಬರೂ ಹಣ ವೆಚ್ಚ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆರ್ಥಿಕ ವಿದ್ಯಮಾನ ಗಳು ಯಾವ ತಿರುವು ಪಡೆಯಲಿವೆ ಎನ್ನುವುದನ್ನು ಕಾದು ನೋಡುತ್ತಿದ್ದಾರೆ.