ನವದೆಹಲಿ: ರೈತರಿಗೆ ಸಾಲ ನೀಡುವ ವಿಷಯದಲ್ಲಿ ಉದಾರತೆಯಿಂದ ವರ್ತಿಸಬೇಕು ಎಂದು ಹಣಕಾಸು ಸಚಿವ ಪೀಯೂಷ್ ಗೋಯಲ್ ಅವರು ಬ್ಯಾಂಕ್ಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಮಧ್ಯಂತರ ಬಜೆಟ್ ಮಂಡನೆ ಮೊದಲು ಗೋಯಲ್ ಈ ಸಲಹೆ ನೀಡಿರುವುದಕ್ಕೆ ಮಹತ್ವ ಇದೆ.
ಸಂಕಷ್ಟದಲ್ಲಿರುವ ಕೃಷಿ ವಲಯಕ್ಕೆ ಕೇಂದ್ರ ಸರ್ಕಾರ ಚುನಾವಣೆ ಮೊದಲು ಭಾರಿ ಕೊಡುಗೆ ಘೋಷಿಸಲಿದೆ ಎನ್ನುವ ವರದಿಗಳ ಮಧ್ಯೆಯೇ ಈ ಸಲಹೆ ಕೇಳಿಬಂದಿದೆ.
ದಾಸ್ ಸಭೆ: ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಬ್ಯಾಂಕ್ಗಳ ಮುಖ್ಯಸ್ಥರ ಜತೆ ಸೋಮವಾರ ಇಲ್ಲಿ ಸಭೆ ನಡೆಸಿ, ಹಲವಾರು ವಿಷಯಗಳನ್ನು ಚರ್ಚಿಸಿದರು.
ದೇಶಿ ಬ್ಯಾಂಕಿಂಗ್ ವಲಯದಿಂದ ಅದರಲ್ಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಿಂದ ಆರ್ಬಿಐ ನಿರೀಕ್ಷಿಸುವ ಸಂಗತಿಗಳನ್ನು ದಾಸ್ ಅವರು ಬ್ಯಾಂಕ್ಗಳ ಮುಖ್ಯಸ್ಥರ ಗಮನಕ್ಕೆ ತಂದರು. ದೇಶಿ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಮುಖ್ಯಸ್ಥರು ಹೊಂದಿರುವ ಭವಿಷ್ಯದ ಮುನ್ನೋಟದ ಬಗ್ಗೆ ಗವರ್ನರ್ ಮಾಹಿತಿ ಪಡೆದರು.
ಫೆಬ್ರುವರಿ 7ರಂದು ಆರ್ಬಿಐ, 2018–19ನೆ ಸಾಲಿನ ತನ್ನ 6ನೆ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ.