ನವದೆಹಲಿ: ಕೇಂದ್ರ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಗುರುವಾರ ಶೇಕಡ 0.30ರವರೆಗೆ ಹೆಚ್ಚಿಸಿದೆ. ಈ ಹೆಚ್ಚಳವು ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕಕ್ಕೆ ಅನ್ವಯವಾಗುತ್ತದೆ.
ಜನಪ್ರಿಯವಾಗಿರುವ ಪಿಪಿಎಫ್, ಎನ್ಎಸ್ಸಿ, ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ. ಸಿಗುವ ಬಡ್ಡಿಗೆ ತೆರಿಗೆ ಇರುವ ಯೋಜನೆಗಳ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ. ಒಂಬತ್ತು ತ್ರೈಮಾಸಿಕಗಳವರಗೆ ಬಡ್ಡಿ ದರ ಪರಿಷ್ಕರಣೆ ಆಗಿರಲಿಲ್ಲ.
ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆಯ ಬಡ್ಡಿ ಹಾಗೂ ಅವಧಿಯನ್ನು ಪರಿಷ್ಕರಿಸಲಾಗಿದೆ. ಈಗ ಕೆವಿಪಿ ಠೇವಣಿಗೆ ಶೇ 7ರಷ್ಟು ಬಡ್ಡಿ (ಇದುವರೆಗೆ ಶೇ 6.9ರಷ್ಟು ಇತ್ತು) ಸಿಗಲಿದ್ದು, 123 ತಿಂಗಳ ಅವಧಿ ನಿಗದಿ ಮಾಡಲಾಗಿದೆ. ಇದುವರೆಗೆ ಕೆವಿಪಿ ಅವಧಿ 124 ತಿಂಗಳು ಆಗಿತ್ತು.