ಮುಂಬೈ: ಬ್ಯಾಂಕ್ ನೌಕರರು ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ನೀಡುವ ಪಿಂಚಣಿ (ಕೌಟುಂಬಿಕ ಪಿಂಚಣಿ) ಮೊತ್ತ ಕಡಿಮೆ ಎಂಬುದನ್ನು ಒಪ್ಪಿಕೊಂಡಿರುವ ಕೇಂದ್ರ ಸರ್ಕಾರವು, ಈ ಮೊತ್ತವನ್ನು ನೌಕರನ ಕೊನೆಯ ಸಂಬಳದ ಶೇಕಡ 30ರಷ್ಟಕ್ಕೆ ಹೆಚ್ಚಿಸುವ ಘೋಷಣೆಯನ್ನು ಬುಧವಾರ ಮಾಡಿದೆ.
ಇದುವರೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ನೌಕರರು ಮೃತಪಟ್ಟರೆ, ಅವರ ಕುಟುಂಬಕ್ಕೆ ನೀಡುವ ಮಾಸಿಕ ಪಿಂಚಣಿ ಮೊತ್ತವು ₹ 9,284ಕ್ಕಿಂತ ಹೆಚ್ಚಾಗಲು ಅವಕಾಶವಿರಲಿಲ್ಲ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದೇವಶಿಶ್ ಪಾಂಡಾ ತಿಳಿಸಿದ್ದಾರೆ.
‘ಈ ಗರಿಷ್ಠ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ನೌಕರನ ಕೊನೆಯ ಸಂಬಳದ ಶೇಕಡ 30ರಷ್ಟನ್ನು ಪಿಂಚಣಿಯಾಗಿ ಆತನ ಕುಟುಂಬಕ್ಕೆ ನೀಡಲಾಗುತ್ತದೆ’ ಎಂದು ಪಾಂಡಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ತೀರ್ಮಾನದಿಂದಾಗಿ ಇಂತಹ ಪಿಂಚಣಿಯ ಮೊತ್ತವು ₹ 30 ಸಾವಿರದಿಂದ ₹ 35 ಸಾವಿರದವರೆಗೆ ಹೆಚ್ಚಳ ಕಾಣಲಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿನ ನೌಕರರ ಖಾತೆಗೆ ಉದ್ಯೋಗದಾತದಿಂದ ಸಿಗುವ ಮೊತ್ತವನ್ನು ಶೇ 14ಕ್ಕೆ ಹೆಚ್ಚಿಸಲು ಕೂಡ ಇಲಾಖೆ ನಿರ್ಧರಿಸಿದೆ. ಇದು ಈವರೆಗೆ ಶೇ 10ರಷ್ಟು ಇತ್ತು ಎಂದು ಅವರು ಹೇಳಿದ್ದಾರೆ.