ನವದೆಹಲಿ: ಅಕ್ಟೋಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ₹ 1 ಲಕ್ಷ ಕೋಟಿ ದಾಟಿದೆ.
ಐದು ತಿಂಗಳ ನಂತರ ಜಿಎಸ್ಟಿ ವರಮಾನವು ₹ 1,00,710 ಕೋಟಿಗೆ ತಲುಪಿದೆ. 67.45 ಲಕ್ಷ ವಹಿವಾಟುದಾರರು ಅಕ್ಟೋಬರ್ ತಿಂಗಳಲ್ಲಿ ಜಿಎಸ್ಟಿ ಲೆಕ್ಕಪತ್ರ ವಿವರ (ರಿಟರ್ನ್) ಸಲ್ಲಿಸಿ ತೆರಿಗೆ ಪಾವತಿಸಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟವನ್ನು ಇದು ಪ್ರತಿಫಲಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
‘ದರ ಕಡಿತ, ತೆರಿಗೆ ತಪ್ಪಿಸುವ ಪ್ರವೃತ್ತಿಯಲ್ಲಿ ಇಳಿಕೆ, ತೆರಿಗೆ ಪಾವತಿ ಬದ್ಧತೆ ಹೆಚ್ಚಳ, ತೆರಿಗೆ ಅಧಿಕಾರಿಗಳ ಹಸ್ತಕ್ಷೇಪ ಇಲ್ಲದಿರುವುದರಿಂದ ವರಮಾನ ಸಂಗ್ರಹದಲ್ಲಿ ಏರಿಕೆಯಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಸಾಧಿಸಿದ ರಾಜ್ಯಗಳ ಸಾಲಿನಲ್ಲಿ ಕೇರಳ (ಶೇ 44), ಜಾರ್ಖಂಡ್ (ಶೇ 20), ರಾಜಸ್ಥಾನ (ಶೇ 14), ಉತ್ತರಾಖಂಡ (ಶೇ 13) ಮತ್ತು ಮಹಾರಾಷ್ಟ್ರ (ಶೇ 11) ಮುಂಚೂಣಿಯಲ್ಲಿ ಇವೆ.
ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹವು ಮೊದಲ ಬಾರಿಗೆ ₹ 1 ಲಕ್ಷ ಕೋಟಿ ( ₹ 1,03,458 ಕೋಟಿ) ದಾಟಿತ್ತು. ಅಲ್ಲಿಂದಾಚೆಗೆ ವರಮಾನವು ₹ 90 ಸಾವಿರ ಕೋಟಿಯ ಆಸುಪಾಸಿನಲ್ಲಿತ್ತು.
‘ತೆರಿಗೆ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ವಿಧಿಸಲು ಜಾರಿಗೆ ತಂದಿರುವ ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್) ಮತ್ತು ಮೂಲದಲ್ಲಿಯೇ ತೆರಿಗೆ ಸಂಗ್ರಹ (ಟಿಸಿಎಸ್) ಕ್ರಮಗಳಿಂದ ತೆರಿಗೆ ಸಂಗ್ರಹದಲ್ಲಿನ ಹೆಚ್ಚಳವು ಇದೇ ಬಗೆಯಲ್ಲಿ ಮುಂದುವರೆಯಲಿದೆ’ ಎಂದು ಅರ್ನೆಸ್ಟ್ ಆ್ಯಂಡ್ ಯಂಗ್ನ ಪಾರ್ಟನರ್ ಅಭಿಷೇಕ್ ಜೈನ್ ಹೇಳಿದ್ದಾರೆ.