ನವದೆಹಲಿ: ಕರ್ನಾಟಕಕ್ಕೆ ಜಿಎಸ್ಟಿ ಪರಿಹಾರವಾಗಿ ನವೆಂಬರ್ 3ರ ನಂತರ ₹1,603 ಕೋಟಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಬುಧವಾರ ಸಂಸತ್ತಿಗೆ ತಿಳಿಸಿದ್ದಾರೆ.
ಬಿಜೆಪಿ ಸಂಸದ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಏಪ್ರಿಲ್ 20ರಿಂದ ಮಾರ್ಚ್ 2021ರ ಅವಧಿಗೆ ಪಾವತಿಸಬೇಕಾದ ಪರಿಹಾರದ ಭಾಗಶಃ ಮೊತ್ತವಾದ ₹10.369 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಬಿಡುಗಡೆ ಮಾಡಿರುವುದು ಹೆಚ್ಚುವರಿ ಪರಿಹಾರ ಮೊತ್ತವಾಗಿದೆ ಎಂದು ತಿಳಿಸಿದ್ದಾರೆ.
ಜಿಎಸ್ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ– 2017 ರ ನಿಬಂಧನೆಗಳ ಪ್ರಕಾರ, 2017-18, 2018-19 ಮತ್ತು 2019-20ನೇ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಈಗಾಗಲೇ ಜಿಎಸ್ಟಿ ಪರಿಹಾರ ಪಾವತಿಸಲಾಗಿದೆ ಎಂದು ಅವರು ಹೇಳಿದ್ದಾರೆ.