ನವದೆಹಲಿ (ಪಿಟಿಐ): ಕಾರು ಮತ್ತು ಬಿಸ್ಕತ್ ಮೇಲಿನ ತೆರಿಗೆ ತಗ್ಗಿಸಬೇಕು ಎನ್ನುವ ಬೇಡಿಕೆಯನ್ನು ಜಿಎಸ್ಟಿಯ ತಜ್ಞರ ಸಮಿತಿ ನಿರಾಕರಿಸಿದೆ.
ಜಿಎಸ್ಟಿ ಮಂಡಳಿ ಶುಕ್ರವಾರ ಸಭೆ ಸೇರಲಿದ್ದು, ಅದಕ್ಕೂ ಎರಡು ದಿನ ಮೊದಲೇ ಸಮಿತಿ ಈ ನಿರ್ಧಾರ ತಿಳಿಸಿದೆ.ತೆರಿಗೆ ದರದಲ್ಲಿ ಇಳಿಕೆ ಮಾಡಿದರೆ ಅದರಿಂದ ಕೇಂದ್ರ ಮತ್ತು ರಾಜ್ಯಗಳ ವರಮಾನ ಸಂಗ್ರಹದಲ್ಲಿ ತೀವ್ರ ಕುಸಿತವಾಗಲಿದೆ ಎನ್ನುವ ಕಾರಣ ನೀಡಿದೆ.
ಒಟ್ಟಾರೆ ಜಿಎಸ್ಟಿ ಸಂಗ್ರಹದಲ್ಲಿ ವಾಹನಗಳ ಮಾರಾಟದಿಂದಲೇ ₹ 50 ಸಾವಿರ ಕೋಟಿಯಿಂದ ₹ 60 ಸಾವಿರ ಕೋಟಿ ವರಮಾನ ಬರುತ್ತಿದೆ. ತೆರಿಗೆ ದರ ತಗ್ಗಿಸಿದರೆ ಸರ್ಕಾರಕ್ಕೆ ಬರುವ ವರಮಾನದಲ್ಲಿ ಭಾರಿ ಇಳಿಕೆ ಆಗುತ್ತದೆ ಎಂದು ತಿಳಿಸಿದೆ.
ವಾಹನ ಉದ್ಯಮಕ್ಕೆ ಚೇತರಿಕೆ ನೀಡಲುಶೇ 28ರ ಗರಿಷ್ಠ ತೆರಿಗೆಯನ್ನು ಶೇ 18ಕ್ಕೆ ತಗ್ಗಿಸಬೇಕು ಎನ್ನುವುದು ಉದ್ಯಮದ ಬೇಡಿಕೆಯಾಗಿದೆ.
ಶೇ 18ರ ಜಿಎಸ್ಟಿ ದರದ ವ್ಯಾಪ್ತಿಗೆ ಬರುವ ವಿಲಾಸಿ ಹೋಟೆಲ್ಗಳ ದಿನದ ಬಾಡಿಗೆ ಮಿತಿಯನ್ನು ₹ 7,500 ರಿಂದ ₹ 12 ಸಾವಿರಕ್ಕೆ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಇದಕ್ಕೆ ಸಮಿತಿಯು ಒಪ್ಪಿಗೆ ಸೂಚಿಸಿದೆ.