ಕಳೆದ ವರ್ಷ ಅರೇಬಿಕಾ, ರೋಬಸ್ಟಾ ಕಾಫಿ ಧಾರಣೆ ಏರಿಕೆಯಾಗಿ ಅಲ್ಪ ಸ್ವಲ್ಪ ಆದಾಯ ಲಭಿಸಿತ್ತು. ಆದರೆ, ಈ ವರ್ಷ ಸುರಿಯುತ್ತಿರುವ ವಿಪರೀತ ಮಳೆಯಿಂದ, ಕಾಫಿ ಕೊಯ್ಲು ವೇಳೆಗೆ ಫಸಲೇ ಇಲ್ಲವಾಗುವ ಆತಂಕ ಮೂಡಿದೆ. ಭಾಗಮಂಡಲ, ಚೇರಂಬಾಣೆ, ಬಕ್ಕ, ಕೊಳಕೇರಿ, ಶ್ರೀಮಂಗಲ, ಶಾಂತಳ್ಳಿ, ಗರ್ವಾಲೆ, ಸೂರ್ಲಬ್ಬಿ, ಪೊನ್ನಂಪೇಟೆ, ಮಾದಾಪುರ ಭಾಗದಲ್ಲಿ ವಾಡಿಕೆಗೂ ಹೆಚ್ಚು ಮಳೆಯಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಯ ತಟದ ತೋಟಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಗಿಡಗಳು ಕೊಳೆಯುವ ಸನ್ನಿವೇಶವೂ ಎದುರಾಗಲಿದೆ. ಮುಂದೆಯೂ ಮಳೆ ಬಂದರೆ ಕಾಳು ಮೆಣಸಿನ ಬಳ್ಳಿಗಳೂ ಕೊಳೆರೋಗಕ್ಕೆ ತುತ್ತಾಗಲಿವೆ’ ಎಂದು ಚೇರಂಬಾಣೆಯ ಮನು ಸೋಮಯ್ಯ ವಿಷಾದಿಸಿದರು.