ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಹಲವು ರಿಯಾಯ್ತಿಗಳನ್ನು ನೀಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ.
ತೆರಿಗೆ ಹಂತ ಮತ್ತು ವಿನಾಯ್ತಿಗಳು ಬದಲಾಗಲಿವೆ. ಸದ್ಯಕ್ಕೆ ಶೇ 30ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುವ ₹ 10 ಲಕ್ಷದವರೆಗಿನ ಆದಾಯದ ಗರಿಷ್ಠ ಮಿತಿ ಹೆಚ್ಚಿಸುವ ಸಾಧ್ಯತೆ ಇದೆ. ಇದರ ಜತೆಗೆ, ಮನೆ ಬಾಡಿಗೆ ಪಾವತಿ ಮತ್ತು ಬ್ಯಾಂಕ್ ಠೇವಣಿಯಿಂದ ಗಳಿಸುವ ಬಡ್ಡಿಗೂ ತೆರಿಗೆ ವಿನಾಯ್ತಿ ನೀಡುವ ಸಾಧ್ಯತೆಯೂ ಇದೆ.
ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉಪಕ್ರಮಗಳ ಅಂಗವಾಗಿ ಬಳಕೆದಾರರ ಬಳಿ ಹೆಚ್ಚು ಹಣ ಇರುವಂತೆ ಮಾಡಿ ಬೇಡಿಕೆ ಹೆಚ್ಚಳಗೊಳ್ಳಲು ಆದಾಯ ತೆರಿಗೆಯಲ್ಲಿ ವಿನಾಯ್ತಿ ನೀಡುವುದು ಸರ್ಕಾರದ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷದ ಫೆಬ್ರುವರಿಯಲ್ಲಿ ಮಂಡಿಸಲಿರುವ 2020–21ನೆ ಹಣಕಾಸು ವರ್ಷದ ಬಜೆಟ್ನಲ್ಲಿ ಈ ತೆರಿಗೆ ಪ್ರಸ್ತಾವಗಳು ಇರಲಿವೆ.
ಕೇಂದ್ರ ಸರ್ಕಾರವು ಇತ್ತೀಚೆಗೆ ಪ್ರಕಟಿಸಿರುವ ಕಾರ್ಪೊರೇಟ್ ತೆರಿಗೆ (ಶೇ 22) ಕಡಿತದಿಂದ, ಶೇ 30ರಷ್ಟು ಆದಾಯ ತೆರಿಗೆ ಪಾವತಿಸುವವರಿಗಿಂತ ಕಂಪನಿಗಳು ಪಾವತಿಸುವ ತೆರಿಗೆ ಪ್ರಮಾಣ ಕಡಿಮೆ ಇರಲಿದೆ. ಈ ಕಾರಣಕ್ಕೆ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೂ ರಿಯಾಯ್ತಿ ನೀಡುವುದು ಸರ್ಕಾರದ ಆಲೋಚನೆಯಾಗಿದೆ.