ಮುಂಬೈ: ಕಾರ್ಪೊರೇಟ್ ಆಡಳಿತಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಇದ್ದರು ಸಹ ಕೆಲವು ಬ್ಯಾಂಕ್ಗಳು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದೇ ಲೋಪ ಎಸಗಿರುವುದು ಆತಂಕ ಮೂಡಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
ಬ್ಯಾಂಕ್ಗಳ ಆಡಳಿತ ಮಂಡಳಿಯ ನಿರ್ದೇಶಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾರ್ಗಸೂಚಿಗಳು ಸರಿಯಾಗಿ ಅನುಷ್ಠಾನವಾಗದೇ ಇರುವುದರಿಂದ ಬ್ಯಾಂಕಿಂಗ್ ವಲಯದಲ್ಲಿ ಒಂದಿಷ್ಟು ಅಸ್ಥಿರತೆಗೆ ಕಾರಣವಾಗುತ್ತದೆ. ಹೀಗಾಗಿ ಬ್ಯಾಂಕ್ಗಳ ಆಡಳಿತ ಮಂಡಳಿಗಳು ಅಂತಹ ಪ್ರವೃತ್ತಿಗಳನ್ನು ಬೆಳೆಯಲು ಬಿಡಬಾರದು ಎಂದು ಹೇಳಿದ್ದಾರೆ.
ಹಣಕಾಸು ಸಾಧನೆಯನ್ನು ಕೃತಕವಾಗಿ ಹೆಚ್ಚಾಗುವಂತೆ ಮಾಡುವ ‘ಸ್ಮಾರ್ಟ್ ಲೆಕ್ಕಪತ್ರ ವಿಧಾನ’ವನ್ನೂ ಬ್ಯಾಂಕ್ಗಳು ಅಳವಡಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಕೆಲವು ಬ್ಯಾಂಕ್ಗಳು ತಮ್ಮ ಸುಸ್ತಿ ಸಾಲದ ಸ್ಥಿತಿಗತಿಯ ಕುರಿತು ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನಿಸಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ ಅಂದು ಅವರು ತಿಳಿಸಿದ್ದಾರೆ.
ಬ್ಯಾಂಕ್ನ ಆಡಳಿತ ಮಂಡಳಿಯ ಚರ್ಚೆಗಳಲ್ಲಿ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಮುಖ್ಯ ಕಾರ್ಯನಿರ್ವಾಹಕರು ಮೇಲುಗೈ ಸಾಧಿಸಿದ್ದಾರೆ. ಇದು ಸರಿಯಲ್ಲ. ಸಿಇಒಗೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲು ಅಡ್ಡಿಮಾಡುವಂತಹ ಪರಿಸ್ಥಿತಿ ಇರಬಾರದು ಎಂದಿದ್ದಾರೆ.
Quote - ಆಡಳಿತ ವ್ಯವಸ್ಥೆ ದೃಢವಾಗಿರುವಂತೆ ನೋಡಿಕೊಳ್ಳುವುದು ಬ್ಯಾಂಕ್ನ ಅಧ್ಯಕ್ಷ ಮತ್ತು ನಿರ್ದೇಶಕರ ಜಂಟಿ ಹೊಣೆಗಾರಿಕೆಯಾಗಿದೆ ಶಕ್ತಿಕಾಂತ ದಾಸ್ ಆರ್ಬಿಐ ಗವರ್ನರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.