ಬೆಂಗಳೂರು: ಶಿಕ್ಷಣ ಕ್ಷೇತ್ರದ ನವೋದ್ಯಮ ಕಂಪನಿ ಅನ್ಅಕಾಡೆಮಿ ತನ್ನ ನೌಕರರ ಪೈಕಿ ಶೇಕಡ 12ರಷ್ಟು ಮಂದಿಯನ್ನು ಕೆಲಸದಿಂದ ತೆಗೆಯಲಿದೆ. ಹೂಡಿಕೆಗಳು ಕಡಿಮೆಯಾಗಿರುವುದು, ಕಂಪನಿಯನ್ನು ಲಾಭದ ಹಳಿಗೆ ತರಬೇಕಿರುವ ಒತ್ತಡ ಈ ನಿರ್ಧಾರಕ್ಕೆ ಕಾರಣ.
ಇದಕ್ಕೆ ಸಂಬಂಧಿಸಿದಂತೆ ಕಂಪನಿಯ ಸಿಇಒ ಬರೆದಿರುವ ಇ–ಮೇಲ್ಅನ್ನು ರಾಯಿಟರ್ಸ್ ಪರಿಶೀಲಿಸಿದೆ. ‘ಇಂದು ಹೂಡಿಕೆಯು ಕಡಿಮೆಯಾಗಿದೆ, ಉದ್ಯಮವನ್ನು ಲಾಭದಾಯಕವಾಗಿ ನಡೆಸುವುದು ಮಹತ್ವದ್ದಾಗುತ್ತದೆ’ ಎಂದು ಸಿಇಒ ಗೌರವ್ ಮುಂಜಾಲ್ ಅವರು ನೌಕರರಿಗೆ ಬರೆದಿರುವ ಇ–ಮೇಲ್ನಲ್ಲಿ ಹೇಳಿದ್ದಾರೆ.
ಎಷ್ಟು ನೌಕರರನ್ನು ಕೆಲಸದಿಂದ ತೆಗೆಯಲಾಗುತ್ತದೆ, ಈಗಿರುವ ನೌಕರರ ಸಂಖ್ಯೆ ಎಷ್ಟು ಎಂಬ ಕುರಿತು ಪ್ರತಿಕ್ರಿಯೆ ನೀಡಲು ಅನ್ಅಕಾಡೆಮಿ ವಕ್ತಾರರು ನಿರಾಕರಿಸಿದ್ದಾರೆ.
ದೇಶದ ಶಿಕ್ಷಣ ಕ್ಷೇತ್ರದ ಹಲವು ನವೋದ್ಯಮ ಕಂಪನಿಗಳು ಸಹಸ್ರಾರು ಮಂದಿ ನೌಕರರನ್ನು ಈಚಿನ ದಿನಗಳಲ್ಲಿ ಕೆಲಸದಿಂದ ತೆಗೆದಿವೆ. ಈ ಕಂಪನಿಗಳಿಗೆ ಹೊಸ ಬಂಡವಾಳ ಸಂಗ್ರಹ ಕಷ್ಟವಾಗುತ್ತಿದೆ ಎನ್ನಲಾಗಿದೆ.