ಬೆಂಗಳೂರು: ಕೈಗಾರಿಕೆ ಸ್ಥಾಪನೆ ಉದ್ದೇಶದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ.
2019ರಲ್ಲಿನ ಹೂಡಿಕೆ ಪ್ರಸ್ತಾವಗಳಲ್ಲಿ ಶೇ 8ರಷ್ಟು ಇಳಿಕೆ ಕಂಡು ಬಂದಿದೆ. ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಹಿಂದಿನ ವರ್ಷ ರಾಜ್ಯದಲ್ಲಿ ₹ 83,492 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳು ಸಲ್ಲಿಕೆಯಾಗಿವೆ.
ಬಂಡವಾಳ ಒಳಹರಿವಿನಲ್ಲಿ ರಾಜ್ಯವು ಈಗ ಗುಜರಾತ್, ಮಹಾರಾಷ್ಟ್ರ ನಂತರದ ಮೂರನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ತೀವ್ರ ಸ್ವರೂಪದ ಪ್ರವಾಹ ಪರಿಸ್ಥಿತಿ ಕಾರಣಕ್ಕೆ ಬಂಡವಾಳ ಹೂಡಿಕೆ ಪ್ರಮಾಣ ಕುಸಿದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿನ ಪರಿಸ್ಥಿತಿಗೆ ವ್ಯತಿರಿಕ್ತವಾದ ಪರಿಸ್ಥಿತಿ ರಾಷ್ಟ್ರೀಯ ಮಟ್ಟದಲ್ಲಿ ಇದೆ. ದೇಶದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣವು ಶೇ 48ರಷ್ಟು ಏರಿಕೆಯಾಗಿ ₹ 6.8 ಲಕ್ಷ ಕೋಟಿಗೆ ತಲುಪಿದೆ. ಅದರಲ್ಲಿ ಗುಜರಾತ ರಾಜ್ಯವು ಗರಿಷ್ಠ ಪಾಲು ಹೊಂದಿದೆ.