ಮುಂಬೈ: ಷೇರುಪೇಟೆ ಹೂಡಿಕೆದಾರರರಿಗೆ ಶುಕ್ರವಾರ ಅತ್ಯಂತ ಶುಭಕರವಾಗಿತ್ತು. ಆರ್ಥಿಕತೆಗೆ ಚೇತರಿಕೆ ನೀಡಲು ಸರ್ಕಾರ ಘೋಷಿಸಿದ ಕ್ರಮಗಳಿಗೆ ಷೇರುಪೇಟೆ ಸಕಾರಾತ್ಮಕವಾಗಿ ಸ್ಪಂದಿಸಿತು.
ಬಿಎಸ್ಇ ಸೂಚ್ಯಂಕದ ಗರಿಷ್ಠ ಏರಿಕೆಯಿಂದಾಗಿ ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 6.8 ಲಕ್ಷ ಕೋಟಿ ಹೆಚ್ಚಳವಾಯಿತು.
ಷೇರುಪೇಟೆಯ ಬಂಡವಾಳ ಮೌಲ್ಯ ₹138.54 ಲಕ್ಷ ಕೋಟಿಗಳಿಂದ ₹ 145.37 ಲಕ್ಷ ಕೋಟಿಗಳಿಗೆ ಏರಿಕೆಯಾಯಿತು.
ಕೇಂದ್ರ ಬಜೆಟ್ನಲ್ಲಿ ವಿದೇಶಿ ಹೂಡಿಕೆಗೆ ಹೆಚ್ಚುವರಿ ಸರ್ಚಾರ್ಜ್ ಘೋಷಿಸಿದ ಬಳಿಕ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹೋಗಲಾರಂಭಿತ್ತು. ಇದರಿಂದ ಹೂಡಿಕೆದಾರರ ಸಂಪತ್ತು ಸಹ ಕರಗುತ್ತಿತ್ತು.ಕಳೆದ ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 1.65 ಲಕ್ಷ ಕೋಟಿ ಕರಗಿತ್ತು.
‘ಜಾಗತಿಕ ಹೂಡಿಕೆಗೆ ಆಹ್ವಾನ’
ನವದೆಹಲಿ: ‘ಕಾರ್ಪೊರೇಟ್ ತೆರಿಗೆ ತಗ್ಗಿಸುವ ಮೂಲಕ ಜಾಗತಿಕ ಹೂಡಿಕೆದಾರರಿಗೆ ದೇಶದಲ್ಲಿ ಬಂಡವಾಳ ತೊಡಗಿಸಲು ದೇಶವು ಆಹ್ವಾನ ನೀಡಿದೆ’ ಎಂದು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯಿಸಿದ್ದಾರೆ.
ಸಚಿವೆ ನಿರ್ಮಲಾ ಅವರು ಬಹಳ ತಡವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವ ಟೀಕೆಗಳಿಗೆ ಅವರು ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಅಮೆರಿಕದಲ್ಲಿ ಇರುವ ಅವರು, ‘ನಿರ್ಮಲಾ ಅವರು ಉತ್ತಮ ನಿರ್ಧಾರ ಪ್ರಕಟಿಸಿದ್ದಾರೆ. ದಿನವನ್ನು ಆರಂಭಿಸಲು ಇಂತಹ ಒಳ್ಳೆಯ ಸುದ್ದಿ ಹೆಚ್ಚಿನ ಉತ್ಸಾಹ ನೀಡುತ್ತದೆ’ ಎಂದಿದ್ದಾರೆ.
‘ಯಾವಾಗಲೂ ಮೊದಲ ಹಂತದಲ್ಲಿಯೇ ಎಲ್ಲವೂ ಸರಿ ಆಗುವುದಿಲ್ಲ. ಕೆಲವೊಮ್ಮೆ ಪ್ರಯೋಗ ಮಾಡಿದ ಬಳಿಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.