ಕೋಲ್ಕತ್ತ: ಚಿನ್ನಾಭರಣ ಉದ್ಯಮವು ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸುತ್ತಿದ್ದು, ಉದ್ಯೋಗ ನಷ್ಟದ ಆತಂಕಕ್ಕೆ ಒಳಗಾಗಿದೆ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ಸಮಿತಿ (ಜಿಜೆಸಿ) ಹೇಳಿದೆ.
‘ಬೇಡಿಕೆ ಇಲ್ಲದೇ ಇರುವುದರಿಂದ ಮಾರಾಟದಲ್ಲಿ ಇಳಿಕೆಯಾಗುತ್ತಿದೆ. ಸಾವಿರಾರು ಕುಶಲ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ’ ಎಂದು ಸಮಿತಿಯ ಉಪಾಧ್ಯಕ್ಷ ಶಂಕರ್ ಸೇನ್ ತಿಳಿಸಿದ್ದಾರೆ.
‘ಚಿನ್ನದ ಆಮದು ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10ಕ್ಕೆ ತಗ್ಗಿಸಬೇಕು ಮತ್ತು ಚಿನ್ನಾಭರಣಗಳ ಮೇಲಿನ ಜಿಎಸ್ಟಿಯನ್ನು ಶೇ 1ಕ್ಕೆ ನಿಗದಿಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
2019–20ರ ಕೇಂದ್ರ ಬಜೆಟ್ನಲ್ಲಿ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಹೆಚ್ಚಿಸಲಾಗಿದೆ. ಜಿಎಸ್ಟಿ ಜಾರಿಗೆ ಬಂದ ಬಳಿಕ ಚಿನ್ನಾಭರಣಗಳ ಮೇಲಿನ ತೆರಿಗೆಯನ್ನು ಶೇ 3ಕ್ಕೆ ಏರಿಕೆ ಮಾಡಲಾಗಿದೆ. ವ್ಯಾಟ್ ಜಾರಿಯಲ್ಲಿದ್ದಾಗ ಶೇ 1ರಷ್ಟಿತ್ತು.
ಚಿನ್ನಾಭರಣ ಖರೀದಿಗೆ ಮಾಸಿಕ ಸಮಾನ ಕಂತು (ಇಎಂಐ) ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.