ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ₹140.41 ಕೋಟಿ ನಿವ್ವಳ ಲಾಭವನ್ನು ಘೋಷಿಸಿದೆ.
ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹87.38 ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ, ಈ ಬಾರಿಯ ನಿವ್ವಳ ಲಾಭವು ಶೇ 60.69 ವೃದ್ಧಿ ಕಂಡಿದೆ.
ಡಿಸೆಂಬರ್ ಅಂತ್ಯಕ್ಕೆ ಪ್ರಸಕ್ತ ಸಾಲಿನ 9 ತಿಂಗಳ ಅವಧಿಗೆ ಒಟ್ಟು ನಿವ್ವಳ ಲಾಭವು ₹415.51 ಕೋಟಿಗಳಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ₹314.61 ಕೋಟಿಗಳಷ್ಟಿತ್ತು. ಒಟ್ಟು ನಿವ್ವಳ ಲಾಭದಲ್ಲಿಯ ವೃದ್ಧಿಯ ದರವು ಶೇ 32.07 ರಷ್ಟಿದೆ.
ಬ್ಯಾಂಕಿನ ಒಟ್ಟು ವ್ಯವಹಾರವು ₹1,17,102 ಕೋಟಿಗೆ ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ 14.67ರಷ್ಟು ಪ್ರಗತಿ ಸಾಧಿಸಿದೆ. ಬ್ಯಾಂಕಿನ ಠೇವಣಿ ₹65,141 ಕೋಟಿಗಳಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕಿನ ಒಟ್ಟು ಠೇವಣಿ ₹57,771 ಕೋಟಿಯಷ್ಟಿತ್ತು. ಠೇವಣಿಗಳಲ್ಲಿನ ವೃದ್ಧಿಯ ದರವು ಶೇ 12.76 ರಷ್ಟಾಗಿದೆ.
ಬ್ಯಾಂಕಿನ ಮುಂಗಡ ₹51,961 ಕೋಟಿಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮುಂಗಡ ₹44,354 ಕೋಟಿಗಳಷ್ಟಿತ್ತು. ಮುಂಗಡಗಳಲ್ಲಿ ವೃದ್ಧಿ ದರ ಶೇ 17.15 ದಾಖಲಿಸಿದೆ. ಬ್ಯಾಂಕಿನ ಒಟ್ಟು ವಸೂಲಾಗದ ಸಾಲದ ಪ್ರಮಾಣವು ಶೇ 4.45 ರಷ್ಟಿದ್ದು, ಪ್ರಸಕ್ತ ವರ್ಷದ ಸೆಪ್ಟೆಂಬರ್ 2018ರ ಅಂತ್ಯಕ್ಕೆ ಅದು ಶೇ 4.66 ಆಗಿತ್ತು.
ನಿರೀಕ್ಷಿತ ಸಾಧನೆ: ನಗರದ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ತೃತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಮಹಾಬಲೇಶ್ವರ ಎಂ.ಎಸ್., ‘ಈ ತ್ರೈಮಾಸಿಕ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ಅನುಗುಣವಾಗಿಯೇ ಇವೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.