ಬೆಂಗಳೂರು: ‘ರಾಜ್ಯವು ನಾವೀನ್ಯ ಮತ್ತು ಸಂಶೋಧನೆಗಳಿಗೆ ಹೆಚ್ಚು ಮಹತ್ವ ನೀಡಿದ್ದು, ಆ ಕುರಿತಾಗಿ ಅಗತ್ಯ ನೀತಿಗಳನ್ನು ಜಾರಿಗೆ ತಂದಿದೆ. ನವೋದ್ಯಮಗಳನ್ನು ಪ್ರೋತ್ಸಾಹಿಸಲು ಮೂಲನಿಧಿಯನ್ನು ಕೊಡುತ್ತಿರುವ ಏಕೈಕ ರಾಜ್ಯ ಕರ್ನಾಟಕ’ ಎಂದು ಐ.ಟಿ. ಮತ್ತು ಬಿ.ಟಿ. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಗುರುವಾರ ಆರಂಭವಾದ ಮೂರು ದಿನಗಳ ‘ಸಿಐಐ ಇನ್ನೋವರ್ಜ್’ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಇನ್ನು ಮೂರು ವರ್ಷಗಳಲ್ಲಿ ದೇಶದ ಡಿಜಿಟಲ್ ಆರ್ಥಿಕತೆಯು ಒಂದು ಟ್ರಿಲಿಯನ್ ಡಾಲರ್ ತಲುಪಲಿದೆ. ಇದಕ್ಕೆ ಕರ್ನಾಟಕವು 300 ಬಿಲಿಯನ್ ಡಾಲರ್ ಕಾಣಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದರು.
‘ನಾವೀನ್ಯ ಪರಿಸರ ವ್ಯವಸ್ಥೆಯಲ್ಲಿ ನವೋದ್ಯಮಗಳು ಪ್ರಮುಖವಾಗಿವೆ. ಏಷ್ಯಾ–ಪೆಸಿಫಿಕ್ ವಲಯದ ಡೇಟಾ ಸೆಂಟರ್ ಹಬ್ ಆಗುವ ಸಾಮರ್ಥ್ಯ ಭಾರತಕ್ಕಿದೆ. ಈ ನಿಟ್ಟಿನಲ್ಲಿ ಪೂರಕ ವಾತಾವರಣ ಕಲ್ಪಿಸಲಾಗುವುದು’ ಎಂದು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ (ಎಸ್ಟಿಪಿಐ) ಪ್ರಧಾನ ನಿರ್ದೇಶಕ ಅರವಿಂದ ಕುಮಾರ್ ತಿಳಿಸಿದರು.
‘ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸಲು ಎಸ್ಟಿಪಿಐ ಈಗಾಗಲೇ 20 ಕೇಂದ್ರಗಳನ್ನು ಸ್ಥಾಪಿಸಿದೆ. ವಿವಿಧ ನಗರಗಳಲ್ಲಿ ಐಒಟಿ ಮತ್ತು ಬ್ಲಾಕ್ಚೈನ್ನಂತಹ ತಂತ್ರಜ್ಞಾನ ಸಾಧನಗಳ ಮೇಲೆ ಕೆಲಸ ಮಾಡಲು ಸ್ಥಳೀಯ ತಜ್ಞರಿಗೆ ಈ ಕೇಂದ್ರಗಳು ಸಹಾಯ ಮಾಡಿವೆ’ ಎಂದು ಅವರು ಹೇಳಿದರು.
ಸಿಐಐ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಉಪಾಧ್ಯಕ್ಷ ಕಮಲ್ ಬಾಲಿ ಮತ್ತು ಸಿಐಐ ಕರ್ನಾಟಕದ ಅಧ್ಯಕ್ಷ ಅರ್ಜುನ್ ಎಂ. ರಂಗಾ ಮಾತನಾಡಿದರು.