ಬೆಂಗಳೂರು: ಕೇಂದ್ರವು ಅನುದಾನ ನೀಡುವಾಗ ಕರ್ನಾಟಕಕ್ಕೆ ಅನ್ಯಾಯವಾಗಿದ್ದು, ಅದನ್ನು ಸರಿಪಡಿಸಿ ಎಂದು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರ ನಿಯೋಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದೆ.
ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದ ನಿಯೋಗ ದೆಹಲಿಯಲ್ಲಿ ಗುರುವಾರ ನಿರ್ಮಲಾ ಅವರನ್ನು ಭೇಟಿ ಮಾಡಿತು.
‘ನೇರ ಮತ್ತು ಪರೋಕ್ಷ ತೆರಿಗೆ ಮೂಲಕ ಕರ್ನಾಟಕವು ₹1.61 ಲಕ್ಷ ಕೋಟಿ (2018ರ ಲೆಕ್ಕ) ಕೇಂದ್ರಕ್ಕೆ ನೀಡುತ್ತಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿರುವುದರ ಜತೆಗೆ ಕೇಂದ್ರದ ತೆರಿಗೆ ಪಾಲಿನಲ್ಲಿ ಎರಡು ವರ್ಷದ ಅಂದಾಜಿನಲ್ಲಿ ₹20 ಸಾವಿರ ಕೋಟಿ ಕಡಿತವಾಗಲಿದೆ’ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅನ್ಯಾಯವನ್ನು ಸರಿಪಡಿಸಿ ಎಂಬ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸದಾನಂದಗೌಡ ತಿಳಿಸಿದ್ದಾರೆ.