ಮುಂಬೈ: ಕೊರೊನಾ ಪರಿಣಾಮಗಳಿಂದ ದೇಶಿ ಆರ್ಥಿಕತೆ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ₹ 1 ಲಕ್ಷ ಕೋಟಿ ಮೊತ್ತದ ಎರಡನೇ ಹಂತದ ಆರ್ಥಿಕ ಕೊಡುಗೆ ಘೋಷಿಸುವ ಭರವಸೆಯು ಷೇರುಪೇಟೆಗಳ ಗುರುವಾರದ ವಹಿವಾಟಿನಲ್ಲಿ ಭಾರಿ ಚೇತರಿಕೆಗೆ ಕಾರಣವಾಯಿತು.
ಮುಂಬೈ ಷೇರುಪೇಟೆ (ಬಿಎಸ್ಇ) ಸಂವೇದಿ ಸೂಚ್ಯಂಕ 1,265 ಅಂಶ ಜಿಗಿತ ಕಂಡು 31,159 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ದಿನದ ವಹಿವಾಟಿನಲ್ಲಿ 31,225 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.
ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 363 ಅಂಶ ಹೆಚ್ಚಾಗಿ 9,112 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಷೇರುಪೇಟೆಯಲ್ಲಿ ಕರಡಿ ಕುಣಿತವೇ (ಮಾರಾಟ ಒತ್ತಡ) ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ತಜ್ಞರು ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
‘ಜಾಗತಿಕ ಮಾರುಕಟ್ಟೆ ಅನುಸರಿಸಿ ದೇಶಿ ಷೇರುಪೇಟೆ ಈ ಗಳಿಕೆ ಕಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಅಲ್ಪಾವಧಿಯಲ್ಲಿ ಕರಡಿಯೇ ಮೇಲುಗೈ ಸಾಧಿಸಲಿದೆ. ಈಗಿನ ಪರಿಸ್ಥಿತಿಯಲ್ಲಿ ಷೇರುಪೇಟೆಯಲ್ಲಿ ಸ್ಥಿರತೆ ನಿರೀಕ್ಷಿಸುವುದು ಕಷ್ಟ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.