ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ವಿಶ್ವದ 6ನೆ ಅತಿದೊಡ್ಡ ಆರ್ಥಿಕತೆಯ ನಿಧಾನ ಗತಿಯ ಪ್ರಗತಿಗೆ ವೇಗ ನೀಡುವ ತುರ್ತು ಸವಾಲು ಎದುರಾಗಲಿದೆ.
ಉದ್ಯೋಗ ಅವಕಾಶ ಸೃಷ್ಟಿ, ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವಸೂಲಾಗದ ಸಾಲದ ಸಮಸ್ಯೆ ಬಗೆಹರಿಸುವ ಅಗತ್ಯ ಇದೆ ಎಂದು ಆರ್ಥಿಕತಜ್ಞರು ಹೇಳಿದ್ದಾರೆ.
2014ರಲ್ಲಿನ ಸಾಧನೆಗಿಂತ ಈ ಬಾರಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಆದರೆ, ಕೃಷಿ ಕ್ಷೇತ್ರದ ಸಂಕಷ್ಟ, ಯುವಕರಲ್ಲಿನ ನಿರುದ್ಯೋಗ ಸಮಸ್ಯೆ, ಮಂದ ಪ್ರಗತಿ ಮತ್ತು ಹಣಕಾಸು ವ್ಯವಸ್ಥೆಯಲ್ಲಿನ ಸಮಸ್ಯೆಗಳ ಮಧ್ಯೆ ಈ ಗೆಲುವು ಸಾಧಿಸಿರುವುದು ಮುಖ್ಯವಾಗಿದೆ.
ಭೂಸ್ವಾಧೀನ ನಿಯಮಗಳ ಸರಳೀಕರಣ, ಕಾರ್ಮಿಕ ಕಾಯ್ದೆಯ ಸುಧಾರಣಾ ಕ್ರಮ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್ಬಿಎಫ್ಸಿ) ನಗದು ಕೊರತೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿನ ವಸೂಲಾಗದ ಸಾಲದ ಸಮಸ್ಯೆಗೆ ಕಡಿವಾಣ ಹಾಕಲು ಹೊಸ ಸರ್ಕಾರ ಮುಂದಾಗಬೇಕಾಗಿದೆ.
ಚಾಲ್ತಿ ಖಾತೆ ಕೊರತೆಗೆ (ಸಿಎಡಿ) ಕಡಿವಾಣ ಹಾಕುವುದು, ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಿಸಿ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವಂತಹ ಇತರ ಸವಾಲುಗಳೂ ಇವೆ.
‘ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಸುಧಾರಣಾ ಕ್ರಮಗಳಾದ ಜಿಎಸ್ಟಿ ಮತ್ತು ಬ್ಯಾಂಕ್ ನೀತಿ ಸಂಹಿತೆಯ (ಐಬಿಸಿ) ಪ್ರಯೋಜನಗಳು ದೊರೆಯುವಂತೆ ಮಾಡಲು ಮುಂದಾಗಬೇಕಾಗಿದೆ’ ಎಂದು ಎಸ್ಆ್ಯಂಡ್ಪಿ ಗ್ಲೋಬಲ್ ರೇಟಿಂಗ್ಸ್ನ ಮುಖ್ಯ ಆರ್ಥಿಕತಜ್ಞ ಶೌನ್ ರೋಚ್ ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿನ ವಸೂಲಾಗದ ಸಾಲದ ಸಮಸ್ಯೆಗೆ ಪರಿಹಾರ, ಬ್ಯಾಂಕ್ಗಳ ಕಾರ್ಯದಕ್ಷತೆಯಲ್ಲಿ ಸುಧಾರಣಾ ಕ್ರಮಗಳ ಅಳವಡಿಕೆಗೆ ಆದ್ಯತೆ ನೀಡಬೇಕಾಗಿದೆ.
‘ಅಲ್ಪಾವಧಿಯಲ್ಲಿನ ಆರ್ಥಿಕ ಬೆಳವಣಿಗೆ ಕ್ರಮಗಳು ಹಣದುಬ್ಬರದ ಪ್ರಭಾವಕ್ಕೆ ಒಳಪಡುತ್ತವೆ. ಹೀಗಾಗಿ ಹಣದುಬ್ಬರದಿಂದ ಹೊರತಾದ ದೀರ್ಘಾವಧಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡುವ ಅಗತ್ಯ ಇದೆ’ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ನ ಮುಖ್ಯ ಆರ್ಥಿಕತಜ್ಞ ದೇವೇಂದ್ರ ಪಂತ್ ಹೇಳಿದ್ದಾರೆ.