ನವದೆಹಲಿ: ವಸೂಲಾಗದ ಸಾಲದ (ಎನ್ಪಿಎ) ಪ್ರಮಾಣ ಹೆಚ್ಚಲು ಹೊಣೆಗಾರರಾದ 6 ಸಾವಿರಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
‘2017–18 ಹಣಕಾಸು ವರ್ಷದಲ್ಲಿ ಸಿಬ್ಬಂದಿಯ ಕರ್ತವ್ಯಲೋಪದ ಕಾರಣಕ್ಕೆ ಸಾಲ ವಸೂಲಿಯಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ 6,049 ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ’ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘ಕರ್ತವ್ಯಲೋಪದ ತೀವ್ರತೆ ಆಧರಿಸಿ ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಕೆಲವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅನೇಕರಿಗೆ ಹಿಂಬಡ್ತಿ, ಕಡ್ಡಾಯ ನಿವೃತ್ತಿ ನೀಡಲಾಗಿದೆ. ಕೆಲ ಪ್ರಕರಣಗಳಲ್ಲಿ ಪೊಲೀಸರು ಮತ್ತು ಸಿಬಿಐಗೆ ದೂರು ನೀಡಲಾಗಿದೆ.
‘ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ₹ 21,388 ಕೋಟಿ ನಷ್ಟಕ್ಕೆ ಗುರಿಯಾಗಿವೆ. ಹಿಂದಿನ ಹಣಕಾಸು ವರ್ಷದಲ್ಲಿ ಈ ನಷ್ಟದ ಪ್ರಮಾಣ ₹ 6,861 ಕೋಟಿಗಳಷ್ಟಿತ್ತು' ಎಂದು ತಿಳಿಸಿದ್ದಾರೆ.