ಚೆನ್ನೈ: ತೈಲ ಮತ್ತು ನೈಸರ್ಗಿಕ ಅನಿಲವನ್ನು ದಕ್ಷ ರೀತಿಯಲ್ಲಿ ಬಳಕೆ ಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತಮಿಳುನಾಡಿನಲ್ಲಿ ಒಂದು ತಿಂಗಳ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ದಕ್ಷ ರೀತಿಯಲ್ಲಿ ಬಳಸುವ ಸಾಮೂಹಿಕ ಪ್ರಯತ್ನದಿಂದ ಇಂಧನ ಬಳಕೆಯಲ್ಲಿ ಉಳಿತಾಯ ಸಾಧ್ಯವಾಗಲಿರುವುದನ್ನು ಜನರಿಗೆ ಮನದಟ್ಟು ಮಾಡಿಕೊಡಲು ಈ ಪ್ರಚಾರ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ‘ಸಕ್ಷಂ 2020’ ಎಂದು ಹೆಸರಿಡಲಾಗಿದೆ.
ಒಂದು ತಿಂಗಳವರೆಗೆ ನಡೆಯಲಿರುವ ಈ ಪ್ರಚಾರ ಅಭಿಯಾನಕ್ಕೆ ರಾಜ್ಯಪಾಲ ಬನವರಿಲಾಲ್ ಪುರೋಹಿತ ಅವರು ಚಾಲನೆ ನೀಡಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ನಿನ ಕಾರ್ಯನಿರ್ವಾಹಕ ನಿರ್ದೇಶಕ ಅರುಪ್ ಸಿನ್ಹಾ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.